ಮುಂಬೈ (ಪಿಟಿಐ): ಬಾಲಿವುಡ್ ಚಿತ್ರಗಳಲ್ಲಿ ಹಾಸ್ಯ ಮತ್ತು ಖಳನಾಯಕನ ಪಾತ್ರಗಳಲ್ಲಿ ಮಿಂಚಿದ ಬಾಲಿವುಡ್ ಹಿರಿಯ ನಟ ಸದಾಶಿವ್ ಅಮ್ರಾಪುರಕರ್ (64) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು ಎಂದು ಅವರ ಪುತ್ರಿ ರೀಮಾ ಅಮ್ರಾಪುರಕರ್ ಹೇಳಿದ್ದಾರೆ.
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು, ನಸುಕಿನ 2.45ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ರೀಮಾ ತಿಳಿಸಿದ್ದಾರೆ. ಹುಟ್ಟೂರು ಅಹ್ಮದ್ನಗರ ಜಿಲ್ಲೆಯಲ್ಲಿ ಮಂಗಳವಾರ ಅಮ್ರಾಪುರಕರ್ ಅಂತ್ಯಕ್ರಿಯೆ ನಡೆಯಲಿದೆ.
‘ಅರ್ಧ ಸತ್ಯ’ ಚಿತ್ರದ ಖಳನಾಯಕನ ಪಾತ್ರ ‘ಇಷ್ಕ್ ಚಿತ್ರದ ಸ್ವಾರ್ಥಿ ತಂದೆಯ ಪಾತ್ರ ಮತ್ತು ‘ಸಡಕ್’ ಚಿತ್ರದಲ್ಲಿ ತೋರಿದ ಅದ್ಭುತ ನಟನೆ ಅವರಿಗೆ ಕೀರ್ತಿಯನ್ನು ತಂದುಕೊಟ್ಟಿತ್ತು.
ಎರಡು ಫಿಲ್ಮಂ ಫೇರ್ ಪ್ರಶಸ್ತಿ, ಉತ್ತಮ ಪೋಷಕ ನಟ ಮತ್ತು ಉತ್ತಮ ಖಳನಾಯಕ ಪ್ರಶಸ್ತಿಗಳು ಅಮ್ರಾಪುರಕರ್ ಅವರಿಗೆ ಸಂದಿವೆ.
‘ಆಂಖೇ’, ‘ಕೂಲಿ ನಂ.1’ ಮತ್ತು ‘ಗುಪ್ತ್: ದಿ ಹಿಡನ್ ಟ್ರೂತ್’ ‘ಮೊಹ್ರಾ’, ‘ಹಮ್ ಸಾತ್ ಸಾತ್ ಹೈ’, ‘ಆಂಟಿ ನಂ. 1’, ‘ ಜೈ ಹಿಂದ್’, ಮತ್ತು ‘ಮಾಸ್ಟರ್’ ಚಲನಚಿತ್ರಗಳಲ್ಲಿ ಪೋಷಕ ನಟ ಮತ್ತು ಹಾಸ್ಯ ಪಾತ್ರಗಳನ್ನು ಅವರು ನಿರ್ವಹಿಸಿದ್ದರು.
‘ಪುರಾನ ಮಂದಿರ್’, ‘ನಸೂರ್’, ಮತ್ತು ‘ಫರಿಷ್ತೆ’ ಚಿತ್ರಗಳಲ್ಲಿ ಅಮ್ರಾಪುರಕರ್ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದರು. 1987ರಲ್ಲಿ ತೆರೆಕಂಡ ‘ಹುಕುಮತ್’ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಧರ್ಮೇಂದ್ರ ಈ ಚಿತ್ರದ ನಾಯಕರಾಗಿದ್ದರು. ಈ ಚಿತ್ರದ ಯಶಸ್ಸಿನ ನಂತರ ಧರ್ಮೇಂದ್ರ ಮತ್ತು ಅಮ್ರಾಪುರಕರ್ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.
ತೆರೆಯ ಮೇಲೆ ನಕಾರಾತ್ಮಕ ಪಾತ್ರಗಳಿಂದ ಭಯ ಹುಟ್ಟಿಸುತ್ತಿದ್ದ ಅಮ್ರಾಪುರಕರ್ ನಿಜ ಜೀವನದಲ್ಲಿ ಒಬ್ಬ ಸಂಭಾವಿತ ವ್ಯಕ್ತಿಯಾಗಿ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಹಿಂದಿ ಚಿತ್ರರಂಗದ ನಂತರ ಕೆಲಕಾಲ ಅವರು ಮರಾಠಿ ಚಿತ್ರರಂಗದಲ್ಲಿ ತೊಡ
ಗಿಕೊಂಡರು. 2012ರಲ್ಲಿ ತೆರೆಕಂಡ ‘ಬಾಂಬೆ ಟಾಕೀಸ್’ ಅಮ್ರಾಪುರಕರ್ ಅವರ ಕೊನೆಯ ಚಿತ್ರ. ಕಳೆದ ಐದು ವರ್ಷಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಅಮ್ರಾಪುರಕರ್ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.