ನವದೆಹಲಿ (ಪಿಟಿಐ): ಅತಿ ಗಣ್ಯರ ಬಳಕೆಯ ಹೆಲಿಕಾಪ್ಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಶುಕ್ರವಾರ ಪಶ್ಚಿಮ ಬಂಗಾಳ ರಾಜ್ಯಪಾಲ ಹಾಗೂ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿತು.
ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ಗಣ್ಯರೊಬ್ಬರನ್ನು ಸಿಬಿಐ ಇದೇ ಮೊದಲ ಬಾರಿಗೆ ವಿಚಾರಣೆಗೆ ಒಳಪಡಿಸಿದೆ.
ಕೋಲ್ಕತ್ತದಲ್ಲಿರುವ ರಾಜಭವನಕ್ಕೆ ತೆರಳಿದ ಸಿಬಿಐ ಅಧಿಕಾರಿಗಳ ತಂಡ ನಾರಾಯಣನ್ ಅವರನ್ನು ಸುಮಾರು ಎರಡು ತಾಸು ಪ್ರಶ್ನಿಸಿತು.
ಸಿಬಿಐ ಅಧಿಕಾರಿಗಳು ರಾಜ್ಯಪಾಲರನ್ನು ‘ಸಾಕ್ಷಿ’ ಎಂದು ಪರಿಗಣಿಸಿದ್ದು ಅವರ ಹೇಳಿಕೆ ದಾಖಲಿಸಿಕೊಂಡರು.
ದೇಶದ ಅತಿ ಗಣ್ಯರ ಬಳಕೆಗಾಗಿ ₨ 3,600 ಕೋಟಿ ವೆಚ್ಚದಲ್ಲಿ ಇಟಲಿ ಮೂಲದ ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪೆನಿ ನಿರ್ಮಿತ ಹೆಲಿಕಾಪ್ಟರ್ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.
ಖರೀದಿಯಲ್ಲಿ ₨ 360 ಕೋಟಿ ಲಂಚ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕವಾಗುವ ಮೊದಲು ನಾರಾಯಣನ್ ಯುಪಿಎ ಅಧಿಕಾರ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು.
ಜತೆಗೆ ಹೆಲಿಕಾಪ್ಟರ್ ಖರೀದಿಯ ಟೆಂಡರ್ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿದ್ದ ತಂಡದ ಸದಸ್ಯರಾಗಿದ್ದರು.