ಮೈಸೂರು: ‘ಮಹರ್ಷಿ ವಾಲ್ಮೀಕಿ ಕೃತಿಯಲ್ಲಿ ಮೂಲ ರಾಮಾಯಣದ ವಾಕ್ಯಗಳನ್ನು ಉದಾಹರಿಸಿದ್ದೇನೆಯೇ ಹೊರತು ಅದು ನನ್ನ ಸ್ವಂತ ಕಲ್ಪನೆಯೂ ಅಲ್ಲ, ಸಂಶೋಧನೆಯೂ ಅಲ್ಲ. ಇದು ಯಾರ ಮನಸ್ಸಿಗಾದರೂ ನೋವನ್ನುಂಟು ಮಾಡಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ನಿಷೇಧಿತ ‘ವಾಲ್ಮೀಕಿ ಯಾರು?’ ಕೃತಿಯ ಲೇಖಕ ಡಾ.ಕೆ.ಎಸ್. ನಾರಾಯಣಾಚಾರ್ಯ ಸ್ಪಷ್ಟಪಡಿಸಿದ್ದಾರೆ.
‘ಮಹರ್ಷಿ ವಾಲ್ಮೀಕಿ ಕೋಗಿಲೆಯಂತೆ. ನಂತರ ರಾಮಾಯಣವನ್ನು ತಿರುಚಿ ಬರೆದ ಕವಿಗಳು ಕಾಗೆಗಳಂತೆ. ಕಾಗೆ, ಕೋಗಿಲೆಗಳು ನೋಡುವುದಕ್ಕೆ ಒಂದೇ ಆಗಿದ್ದರೂ ಅವರ ಕೃತಿಗಳಲ್ಲಿ ವ್ಯತ್ಯಾಸ ತಿಳಿಯುತ್ತದೆ ಎಂದು ಹೇಳಿದ್ದೇನೆಯೇ ಹೊರತು ಬೇಡ, ನಾಯಕ ಜನಾಂಗವನ್ನು ಕಾಗೆ, ಹದ್ದುಗಳಿಗೆ ಹೋಲಿಸಿಲ್ಲ. ಆದರೆ, ಇದನ್ನು ತಿರುಚಿ ವಿವಾದ ಎಬ್ಬಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಮಹರ್ಷಿ ವಾಲ್ಮೀಕಿ ಕೃತಿಯ ಎರಡನೇ ಮುದ್ರಣದಲ್ಲಿ ಎಲ್ಲಾ ಆಕ್ಷೇಪಗಳಿಗೂ ಸಮಂಜಸವಾದ ಸಮಾಧಾನಗಳನ್ನು ಸೇರಿಸಿ ಮುದ್ರಿಸಿ ಬಿಡುಗಡೆ ಮಾಡಲಾಗಿದೆ. ಮಹರ್ಷಿ ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಬೇಕು. ಮಹರ್ಷಿ ವಾಲ್ಮೀಕಿ ಭವನಗಳ ನಿರ್ಮಾಣ ಸ್ವಾಗತಾರ್ಹ. ಬೇಡ, ನಾಯಕ ಜನಾಂಗದವರನ್ನು, ಅವರ ಅಪಾರ ಕೊಡುಗೆಗಳನ್ನು ಕೃತಿಯಲ್ಲಿ ಕೊಂಡಾಡಿದ್ದೇನೆ. ಅವರು ನನಗೆ ಆದರಣೀಯರು. ಅವರನ್ನು ಕೃತಿಯಲ್ಲಿ ಎಲ್ಲಿಯೂ ಅವಹೇಳನ ಮಾಡಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.