ಬೆಂಗಳೂರು: ‘ಸಮಾಜ ಸುಧಾರಕರಾದ ನಾರಾಯಣ ಗುರುಗಳ ಜನ್ಮದಿನವನ್ನು ಸರ್ಕಾರದ ವತಿಯಿಂದ ಆಚರಿಸಬೇಕು’ ಎಂದು ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ ಮಂಗಳವಾರ ಇಲ್ಲಿ ಆಗ್ರಹಿಸಿದರು.
‘ಈಡಿಗ ಸಮುದಾಯದ ನಾರಾಯಣ ಗುರುಗಳು ದೇಶದಲ್ಲಿ ಅಸ್ಪೃಶ್ಯತೆ ಹೋಗಲಾಡಿಸುವ ಮತ್ತು ಶೈಕ್ಷಣಿಕ ಕ್ರಾಂತಿ ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಹೆಸರಿನಲ್ಲಿ ಈಗಾಗಲೇ ಕೇಂದ್ರ ಸೇರಿದಂತೆ ಅನೇಕ ರಾಜ್ಯ ಸರ್ಕಾರಗಳು ಅಂಚೆಚೀಟಿ ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಿವೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ರಾಜ್ಯ ಸರ್ಕಾರ ಈವರೆಗೆ ನಾರಾಯಣ ಗುರುಗಳ ಹೆಸರಿನಲ್ಲಿ ಜಯಂತಿ ಆಚರಿಸುವ ಭರವಸೆ ನೀಡುತ್ತಾ ನಿರ್ಲಕ್ಷ್ಯತನ ತೋರುತ್ತ ಬಂದಿದೆ. ಬರುವ ಆಗಸ್ಟ್ 26ರಂದು ಸರ್ಕಾರದಿಂದ ಜಯಂತಿ ಆಚರಿಸಲೇಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ’ ಎಂದರು.