ಚೆನ್ನೈ (ಪಿಟಿಐ): ಹಂತಕರ ಬಿಡುಗಡೆ ನಿರ್ಧಾರ ಅಂದಿನ ಆತ್ಮಹತ್ಯಾ ದಾಳಿಯಲ್ಲಿ ರಾಜೀವ್ ಗಾಂಧಿ ಅವರೊಂದಿಗೆ ಸಾವಿಗೀಡಾದ ವ್ಯಕ್ತಿಗಳ ಕುಟುಂಬ ಸದಸ್ಯರ ಮುನಿಸಿಗೆ ಕಾರಣವಾಗಿದೆ.
‘ಹಂತಕರು ತಮಿಳರು ಎಂದು ಅವರು ಹೇಳುತ್ತಿದ್ದಾರೆ. ಆದರೆ ಅಂದು ಸಾವಿಗೀಡಾದ ವ್ಯಕ್ತಿಗಳ ಕುಟುಂಬಿಕರಾದ ನಾವು ತಮಿಳರಲ್ಲವೇ?’ ಎಂದು ರಾಜೀವ್ ಅವರೊಂದಿಗೆ ಸಾವಿಗೀಡಾದ ಕಾಂಗ್ರೆಸ್ ಕಾರ್ಯಕರ್ತ ಮುನಿಸ್ವಾಮಿ ಎಂಬವರ ಮಗ ಮೋಹನ್ ಪ್ರಶ್ನಿಸಿದ್ದಾರೆ.
ಮಾನವ ಹಕ್ಕುಗಳ ಕಾರ್ಯಕರ್ತರು ನಳಿನಿ ಮತ್ತು ಇತರ ಹಂತಕರನ್ನು ಮಾತ್ರ ಭೇಟಿಯಾಗುತ್ತಾರೆ. ಕಳೆದ 23 ವರ್ಷಗಳಲ್ಲಿ ಸಂತ್ರಸ್ತರ ಕುಟುಂಬದವರು ಸತ್ತಿದ್ದಾರೆಯೇ ಬದುಕಿದ್ದಾರೆಯೇ ಎಂದು ಯಾರೂ ನೋಡಿಲ್ಲ ಎಂದು ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟ ರಾಜೀವ್ ಅವರಿಗೆ ಬೆಂಗಾವಲಾಗಿ ಹೋಗಿದ್ದ ಕಾಂಚೀಪುರಂ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಇಕ್ಬಾಲ್ ಪುತ್ರ ಜಾವೇದ್ ಹೇಳಿದ್ದಾರೆ.
‘18 ವರ್ಷದವನಿದ್ದಾಗ ತಂದೆಯನ್ನು ಕಳೆದುಕೊಂಡು ಉನ್ನತ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ. ನಮ್ಮ ಜೀವನ ಅತ್ಯಂತ ವೇದನಾಮಯವಾಗಿತ್ತು’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.