ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯವರು ತರಾತುರಿಯಲ್ಲಿ ನೇಮಕಾತಿ ಮಾಡಿದ್ದಾರೆ ಎಂಬ ಆರೋಪದಲ್ಲೂ ಹುರುಳಿದೆ ಎಂದು ನ್ಯಾಯಮೂರ್ತಿ ಪದ್ಮರಾಜ್ ಸಮಿತಿ ಅಭಿಪ್ರಾಯಪಟ್ಟಿದೆ. ವಿಧಾನ ಪರಿಷತ್ನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗಲೇ ಕುಲಪತಿ ಅವರು ವಿವಿಧ ವಿಭಾಗಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ 2014ರ ಮೇ 22 ಮತ್ತು 23ರಂದು ಸಂದರ್ಶನ ನಡೆಸಿ ಮೇ 24ರ ಮಧ್ಯರಾತ್ರಿಯೇ ನೇಮಕಾತಿ ಆದೇಶವನ್ನೂ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ, ಕುಲಪತಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು ನಿಜ ಎಂದು ಹೇಳಿದೆ. 2014ರ ಮೇ 20ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. 2014ರ ಜೂನ್ 28ರ ವರೆಗೂ ಜಾರಿಯಲ್ಲಿತ್ತು. ಈ ಅವಧಿಯಲ್ಲೇ ಅನೇಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ ನೇಮಕಾತಿಯನ್ನೂ ಮಾಡಿಕೊಳ್ಳಲಾಗಿದೆ.
ಸಲಹೆಗೆ ಸಿಗದ ಗೌರವ: 2014ರ ಜೂನ್ 6ರಂದು ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಬೆಳಗಾವಿ
ವಿಭಾಗದ ಪ್ರಾದೇಶಿಕ ಆಯುಕ್ತರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದು, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ನೇಮಕಾತಿ ಪ್ರಕ್ರಿಯೆ ನಡೆಸುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ. ಇಷ್ಟಾದರೂ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ 2014ರ ಜೂನ್ 23ರಂದು 15 ಸಹಾಯಕ ಗ್ರಂಥಪಾಲಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 2010ರ ಮಾರ್ಚ್ 23ರಂದು 26 ಸಹಾಯಕ ಗ್ರಂಥಪಾಲಕರ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಅದರಲ್ಲಿ ಮೀಸಲಾತಿಯನ್ನೂ ನಿಗದಿ ಮಾಡಲಾಗಿತ್ತು. ಅಲ್ಲದೆ ಅಭ್ಯರ್ಥಿಗಳ ಅನುಭವದ ಬಗ್ಗೆ ಏನೂ ಪ್ರಸ್ತಾಪ ಇರಲಿಲ್ಲ. ಆದರೆ 2014ರ ಜೂನ್ 23ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಅತಿಥಿ ಗ್ರಂಥಪಾಲಕರೂ ಸೇರಿದಂತೆ ತಾತ್ಕಾಲಿಕ ಅಥವಾ ಅರೆಕಾಲಿಕ ಗ್ರಂಥಪಾಲಕರಾಗಿ ಕೆಲಸ ಮಾಡಿದವರ ಅನುಭವವನ್ನು ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ.
ಆ ಮೂಲಕ ಅರ್ಹ ಮತ್ತು ಪರಿಣತ ಅಭ್ಯರ್ಥಿಗಳ ಹಕ್ಕನ್ನು ಮೊಟಕುಗೊಳಿಸಲಾಗಿದೆ. ವಿಶ್ವವಿದ್ಯಾಲಯದ ಹಲವಾರು ವಿಭಾಗಗಳಲ್ಲಿ ಅತಿಥಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಪದ್ಧತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಂತಹ ಅಭ್ಯರ್ಥಿಗಳು ಪಡೆದ ಅನುಭವವನ್ನು ನೇಮಕಾತಿ ಸಂದರ್ಭದಲ್ಲಿ ಪರಿಗಣಿಸು-ವುದಿಲ್ಲ ಎಂದು ಹೇಳುವುದು ಸರಿಯಲ್ಲ.
ಇದರಿಂದ ಅಧಿಸೂಚನೆ ಹೊರಡಿಸುವುದರಲ್ಲಿಯೇ ತಪ್ಪಾಗಿದೆ. ಇದು ಇದೇ ವಿಶ್ವವಿದ್ಯಾಲಯದಲ್ಲಿ ಅತಿಥಿ ಸಿಬ್ಬಂದಿಯಾಗಿ ಅನುಭವ ಪಡೆದವರ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಹೀಗೆ ಮಾಡುವುದು ಸರಿಯಲ್ಲ ಎಂದೂ ಸಮಿತಿ ಹೇಳಿದೆ.
ತಾರ್ಕಿಕ ಮನಸ್ಸು ಅಗತ್ಯ: ಕುಲಪತಿ
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳನ್ನು ವಿಚಾರಣೆ ಮಾಡಲು ಪ್ರಸಿದ್ಧ ಪತ್ತೇದಾರ ಶರ್ಲಾಕ್ ಹೋಮ್ಸ್ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಬಿ.ಪದ್ಮರಾಜ್ ತಮ್ಮ ವರದಿಯಲ್ಲಿ ಹೇಳಿರುವುದಕ್ಕೆ ಕುಲಪತಿ ಡಾ.ಎಚ್.ಬಿ. ವಾಲಿಕಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇವಲ ನಾಲ್ಕು ಮಂದಿ ನೀಡಿದ ದೂರಿನ ಹಿನ್ನೆಲೆಯಲ್ಲಿ ನಡೆಸಿದ ವಿಚಾರಣೆ ಹಾಗೂ ತಮ್ಮ ವಿರುದ್ಧ ಹಲವಾರು ದಿನಗಳಿಂದ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯನ್ನು ಅರಿಯಲೂ ಶರ್ಲಾಕ್ ಹೋಮ್ಸ್ ಅಗತ್ಯವಿಲ್ಲ. ತಾರ್ಕಿಕವಾದ ಮನಸ್ಸು ಇದ್ದರೆ ಸಾಕು ಎಂದು ಅವರು ಹೇಳಿದ್ದಾರೆ.
ಕೆ.ಎಸ್.ಜಯಂತ್, ಈರೇಶ ಅಂಚಟಗೇರಿ, ಅರುಣ ಜೋಶಿ, ಡಾ.ರಘು ಅಕಮಂಚಿ ಅವರು ಸಲ್ಲಿಸಿದ ದೂರು ಹಾಗೂ ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲೂ ತಾರ್ಕಿಕ ಮನಸ್ಸು ಇದ್ದರೆ ಸಾಕು ಎಂದೂ ಅವರು ಹೇಳಿದ್ದಾರೆ.
(ಮುಂದುವರಿಯುವುದು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.