ರೈತ ಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಹಲವು ಕನಸುಗಳಲ್ಲಿ ನೀರಾ ಉತ್ಪನ್ನವೂ ಒಂದು. ತೆಂಗಿನ ಹೊಂಬಾಳೆಯಿಂದ ತೆಗೆಯುವ ರಸವೇ ನೀರಾ. ನಮ್ಮ ರೈತರಿಗೆ ನೀರಾ ತೆಗೆಯಲು ಅವಕಾಶ ಕೊಡಬೇಕು ಎಂದು ದೊಡ್ಡ ಮಟ್ಟದ ಚಳವಳಿ ಮಾಡಿದ್ದೂ ಆಗಿದೆ. ನೀರಾ ಉತ್ಪನ್ನನಿಂದ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು ಎಂಬುದು ಅವರ ನಂಬಿಕೆಯಾಗಿತ್ತು.
ನಾವು ಇದಕ್ಕೆ ನೀರಾ ಅನ್ನುವುದಕ್ಕಿಂತ ಕಲ್ಪರಸ ಅಥವಾ ಕಲ್ಪಾಮೃತ ಎಂದು ಹೇಳುವುದು ಲೇಸು. ಕಲ್ಪರಸದಲ್ಲಿ ಪೋಷಕಾಂಶಗಳು ಅಧಿಕ. ಕಲ್ಪರಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ವ್ಯವಸ್ಥಿತವಾಗಿ ಮಾರಾಟ ಮಾಡಿದಲ್ಲಿ ರೈತರಿಗೆ ವರದಾನ ಆಗಬಲ್ಲದು.
ರಾಸಾಯನಿಕಗಳಿಂದ ತಯಾರಿಸಿದ, ಆರೋಗ್ಯಕ್ಕೆ ಮಾರಕವಾದ ಪೇಯಗಳ ಬಳಕೆ ತಪ್ಪಿಸಲು ಕಲ್ಪರಸ ಇಳಿಸಲು ಅನುಮತಿ ನೀಡಬೇಕು.
ನಮ್ಮ ಪಕ್ಕದ ರಾಜ್ಯಗಳಾದ ಗೋವಾ ಮತ್ತು ಕೇರಳದಲ್ಲಿ ಕಲ್ಪರಸ ಇಳಿಸಲು ಮತ್ತು ಅದರ ಉಪಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಕೇರಳದಲ್ಲಿ ಕಲ್ಪರಸ ನೀತಿ ರೂಪಿಸಲಾಗಿದೆ. ಅದರಿಂದ ಅಲ್ಲಿನ ರೈತರಿಗೆ ಹೆಚ್ಚಿನ ಪ್ರಯೋಜನವಾಗಿದೆ. ಕಲ್ಪರಸ ಇಳಿಸಲು ನಮ್ಮ ಸರ್ಕಾರವೂ ಅನುಮತಿ ನೀಡಬೇಕು.
-ಮಂಜುನಾಥ ಹೊಳಲು, ಶಿಗ್ಗಾಂವ