ನವದೆಹಲಿ,ಸಂಭಾಲ (ಪಿಟಿಐ/ಐಎಎನ್ಎಸ್): ಅತ್ಯಾಚಾರಿಗಳನ್ನು ಗಲ್ಲಿಗೇರಿಸಬಾರದು ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ನೀಡಿರುವ ಹೇಳಿಕೆ ದೇಶದಾದ್ಯಂತ ವಿವಾದ ಸೃಷ್ಟಿಸಿದೆ.
ಈ ಹೇಳಿಕೆಯನ್ನು ಮುಲಾಯಂ ಸಿಂಗ್ಯಾದವ್ ಹಿಂದಕ್ಕೆ ಪಡೆಯಬೇಕು ಮತ್ತು ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪಟ್ಟು ಹಿಡಿದಿವೆ. ಈ ಮಧ್ಯೆ ಅತ್ಯಾಚಾರದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವ ಮುಲಾಯಂ ಸಿಂಗ್ ಯಾದವ್ ‘ ಸಮಾಜವಾದಿ ಪಕ್ಷ ಮಹಿಳೆಯರಿಗೆ ಗೌರವ ನೀಡಿದಷ್ಟು ಬೇರೆ ಯಾರೂ ನೀಡುತ್ತಿಲ್ಲ’ ಎಂದಿದ್ದಾರೆ.
ಆದರೆ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎನ್ನುವ ಕಾನೂನಿಗೆ ತಿದ್ದುಪಡಿ ತರಬೇಕು. ತಪ್ಪು ಕಾಯಿದೆ ಮುಂದುವರಿಯಲು ಅವಕಾಶ ಕೊಡುವುದಿಲ್ಲ’ ಎನ್ನುವ ತಮ್ಮ ವಾದವನ್ನು ಅವರು ಪುನರುಚ್ಚಿಸಿದ್ದಾರೆ.
‘ಮರಣದಂಡನೆ ಶಿಕ್ಷೆ ಕುರಿತು ಜಗತ್ತಿನಾದ್ಯಂತ ಚರ್ಚೆಗಳು ನಡೆಯುತ್ತಿವೆ. ಕೆಲವು ರಾಷ್ಟ್ರಗಳು ಈ ಶಿಕ್ಷೆಯ ಮೇಲೆ ನಿಷೇಧ ಹೇರಿವೆ’ ಎಂದು ಮುಲಾಯಂ ಹೇಳಿದ್ದಾರೆ. ‘ಅತ್ಯಾಚಾರ ಪ್ರಕರಣಗಳ ವಿರುದ್ಧ ಉಗ್ರ ಶಿಕ್ಷೆ ಕೈಗೊಳ್ಳಬೇಕು. ಆದರೆ, ಮಗ್ಧರಿಗೆ ಶಿಕ್ಷೆಯಾಗಬಾರದು’ ಎಂದು ಅವರು ತಿಳಿಸಿದ್ದಾರೆ.
‘ನಾನು ಹೇಳಿರುವುದರಲ್ಲಿ ತಪ್ಪೇನಿದೆ. ನಾನು ನೀಡಿರುವ ಹೇಳಿಕೆಯ ಮೇಲೆ ದೇಶದಾದ್ಯಂತ ಚರ್ಚೆಗಳು ನಡೆಯುತ್ತಿವೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಜನರು ನನ್ನ ವಾದವನ್ನು ಸಮರ್ಥಿಸಿಕೊಂಡು ಮಾತನಾಡುತ್ತಿದ್ದಾರೆ’ ಎಂದು ಮುಲಾಯಂ ಸಿಂಗ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ನುಡಿದಿದ್ದಾರೆ.
ಮಹಿಳೆಯರ ಬಗ್ಗೆ ಅಗೌರವ– ಕಾಂಗ್ರೆಸ್: ‘ಒಬ್ಬ ಹಿರಿಯ ನಾಯಕ ನೀಡಿರುವ ಹೇಳಿಕೆ ಆಕ್ಷೇಪಾರ್ಹ ಅಷ್ಟೇ ಅಲ್ಲ. ಇದು ದುಃಖಕರ ಮತ್ತು ಅವಮಾನಕರ. ಮುಲಾಯಂ ಸಿಂಗ್ ಮಹಿಳೆಯರ ಬಗ್ಗೆ ಎಷ್ಟು ಗೌರವ ಹೊಂದಿದ್ದಾರೆ ಎನ್ನುವುದಕ್ಕೆ ಈ ಹೇಳಿಕೆಯೇ ಸಾಕ್ಷಿ’ ಎಂದು ಕಾಂಗ್ರೆಸ್ ನಾಯಕ ಮೀಮ್ ಅಫ್ಜಲ್ ಹೇಳಿದ್ದಾರೆ.
ಅಸಹ್ಯಕರ– ಬಿಜೆಪಿ: ಮುಲಾಯಂ ಸಿಂಗ್ ನೀಡಿರುವ ಹೇಳಿಕೆ ‘ಅಸಹ್ಯಕರ’ ಮತ್ತು ‘ಆಘಾತಕಾರಿ’. ಇದರಿಂದ ರಾಜ್ಯಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಬಿಜೆಪಿ ಹೇಳಿದೆ. ‘ಯುಪಿಎ ಅಂಗ ಪಕ್ಷಗಳಲ್ಲಿ ಒಂದಾಗಿರುವ ಸಮಾಜವಾದಿ ಪಕ್ಷದ ನಾಯಕ ನೀಡಿರುವ ಹೇಳಿಕೆ ಕುರಿತು ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. ‘ಮುಲಾಯಂ ಸಿಂಗ್ ಇಂತಹ ಹೇಳಿಕೆ ನೀಡಿರುವುದು ನಾಚಿಕೆಗೇಡು. ಅವರು ಕ್ಷಮೆ ಕೇಳಲೇಬೇಕು’ ಎಂದು ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಅತಿ ಸೂಕ್ಷ್ಮವಾದ ವಿಷಯಗಳನ್ನು ಹಿಡಿದುಕೊಂಡು ಸಮಾಜವಾದಿ ಪಕ್ಷದ ನಾಯಕ ರಾಜಕೀಯ ಮಾಡುತ್ತಿದ್ದಾರೆ. ಇಂತಹ ನಡವಳಿಕೆಯುಳ್ಳ ನಾಯಕರನ್ನು ದೇಶದ ಜನ ಸ್ವೀಕರಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ. ‘ಯಾವುದೇ ಸಂದರ್ಭದಲ್ಲಿ ಮುಲಾಯಂ ಸಿಂಗ್ ಅವರಿಂದ ಕೇಂದ್ರದಲ್ಲಿ ಸರ್ಕಾರ ರಚನೆ ಸಾಧ್ಯವಿಲ್ಲ’ ಬಿಜೆಪಿ ಇನ್ನೊಬ್ಬ ನಾಯಕಿ ಸ್ಮೃತಿ ಇರಾನಿ ಹೇಳಿದ್ದಾರೆ.
‘ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆ ನೀಡುವ ಕಾನೂನಿಗೆ ತಿದ್ದುಪಡಿ ತರುವುದಕ್ಕೆ ನನ್ನಂತಹ ಮಹಿಳೆಯರ ವಿರೋಧವಿದೆ ಎನ್ನುವುದನ್ನು ಮುಲಾಯಂ ಸಿಂಗ್ ಅವರಿಗೆ ಹೇಳಲು ಇಚ್ಛಿಸುತ್ತೇನೆ’ ಎಂದು ಅಮೇಠಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಹೇಳಿದ್ದಾರೆ. ಮುಲಾಯಂ ಸಿಂಗ್ ಯಾದವ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಆರ್ಜೆಡಿ ಪಕ್ಷದ ವರಿಷ್ಠ ಲಾಲೂ ಪ್ರಸಾದ್ ಟೀಕಿಸಿದ್ದಾರೆ.
ಆಜ್ಮಿ ವಿವಾದಿತ ಹೇಳಿಕೆ
ಲಖನೌ: ಸಮಾಜವಾದಿ ಪಕ್ಷದ ನಾಯಕರು ಒಬ್ಬರಾದ ಮೇಲೆ ಇನ್ನೊಬ್ಬರಂತೆ ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಾ, ಪರಸ್ಪರ ಮೀರಿಸಲು ಯತ್ನಿಸುತ್ತಿದ್ದಾರೆ. ಅತ್ಯಾಚಾರಿಗಳಿಗೆ ಮರಣದಂಡನೆ ಸಲ್ಲ ಎಂದು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೇಳಿರುವ ಬೆನ್ನಲ್ಲೇ, ಪಕ್ಷದ ಮಹಾರಾಷ್ಟ್ರ ಘಟಕ ಅಧ್ಯಕ್ಷ ಅಬು ಆಜ್ಮಿ, ಅತ್ಯಾಚಾರಕ್ಕೆ ಒಳಗಾದವರು ಸೇರಿದಂತೆ ವಿವಾಹಯೇತರ, ವಿವಾಹಪೂರ್ವ ಲೈಂಗಿಕತೆಯಲ್ಲಿ ತೊಡಗಿದ ಮಹಿಳೆಯರನ್ನು ಗಲ್ಲಿಗೇರಿಸಬೇಕು ಎಂದಿದ್ದಾರೆ. ಆದರೆ ಆಜ್ಮಿ ಸೊಸೆ, ಬಾಲಿವುಡ್ ನಟಿ ಆಯೇಶಾ ಟಾಕಿಯಾ ಅವರು ಮಾವನ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ತನಗೆ ಮತ್ತು ಪತಿ ಫರ್ಹಾನ್ಗೆ ಮುಜುಗರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಹೇಳಿಕೆ ಮಹಿಳೆಗೆ ತೋರಿದ ಅಗೌರವವಾಗಿದ್ದು, ಇದು ನಿಜವಾದಲ್ಲಿ ಖೇದಕರ ಎಂದು ತಿಳಿಸಿದ್ದಾರೆ. ಮುಂಬೈ ಉತ್ತರ ಕೇಂದ್ರೀಯ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷ ಅಭ್ಯರ್ಥಿ ಫರ್ಹಾನ್ ಸಹ ತಂದೆಯ ಹೇಳಿಕೆಗೆ ವಿರೋಧ ಸೂಚಿಸಿದ್ದು, ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಸೂಕ್ತ ಎಂದೂ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.