ನವದೆಹಲಿ: ಕೇವಲ ಮೂರು ದಿನ ಹಳೆಯದಾದ ಸರ್ಕಾರಕ್ಕೆ ‘ನೂರು ದಿನಗಳ ದಿಕ್ಸೂಚಿ’ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 10 ಅಂಶಗಳ ಕಾರ್ಯಸೂಚಿ ಸಿದ್ಧಪಡಿಸಿದ್ದಾರೆ.ಜಡವಾಗಿರುವ ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ನಿಗದಿತ ಅವಧಿಯೊಳಗೆ ಗುರಿ ಮುಟ್ಟುವಂತೆ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ, ಸರ್ಕಾರದ ಹತ್ತು ಅಂಶಗಳ ಕಾರ್ಯಸೂಚಿಯನ್ನು ಸಹೋದ್ಯೋಗಿಗಳಿಗೆ ವಿವರಿಸಿದರು. ಎಲ್ಲ ಸಚಿವರು ಇದೇ ಹಾದಿ ತುಳಿದು ಉತ್ತಮ ಆಡಳಿತಕ್ಕೆ ಒತ್ತು ನೀಡುವಂತೆ ಸಲಹೆ ಮಾಡಿದರು. ಬಂಡವಾಳ ಹೂಡಿಕೆ ಹೆಚ್ಚಳ, ನಿಗದಿತ ಕಾಲಮಿತಿಯಲ್ಲಿ ಮೂಲ ಸೌಲಭ್ಯ ಯೋಜನೆಗಳ ಪೂರ್ಣ-ಗೊಳಿಸುವಿಕೆ ಮತ್ತು ದೇಶದ ಪ್ರಗತಿಗೆ ನೈಸರ್ಗಿಕ ಸಂಪನ್ಮೂಲದ ಬಳಕೆ ಸೇರಿದಂತೆ ಅನೇಕ ಮಹತ್ವದ ಅಂಶಗಳು ಮೋದಿ ಅವರ ನೂರು ದಿನಗಳ ಕಾರ್ಯಸೂಚಿಯಲ್ಲಿವೆ.
10 ಅಂಶಗಳ ಸೂತ್ರಗಳು: ಆರ್ಥಿಕ ಪ್ರಗತಿಗೆ ಇರುವ ಅಡಚಣೆಗಳ ನಿವಾರಣೆ. ಶಿಕ್ಷಣ, ಇಂಧನ ಮತ್ತು ನೀರಿಗೆ ಆದ್ಯತೆ. ಜನಪರ ಆಡಳಿತ. ಸರ್ಕಾರಿ ಟೆಂಡರ್ಗಳ ಇ–ಹರಾಜು, ಕಾಲಮಿತಿಯಲ್ಲಿ ನೀತಿ–ಯೋಜನೆಗಳ ಜಾರಿ. ಅಂತರ ಸಚಿವಾಲಯ ನಡುವಣ ಸಹಕಾರ ಸುಧಾರಣೆ, ಅಧಿಕಾರಶಾಹಿಗೆ ಮುಕ್ತ ಸ್ವಾತಂತ್ರ್ಯ – ಇವು ಪ್ರಧಾನಿ ಸಿದ್ಧಪಡಿಸಿರುವ ಹತ್ತು ಅಂಶದ ಸೂತ್ರಗಳು.
ದೇಶದ ಅಭಿವೃದ್ಧಿಯಲ್ಲಿ ರಾಜ್ಯಗಳ ಪಾತ್ರ ಮಹತ್ವದ್ದು ಎಂದಿರುವ ಮೋದಿ, ವಿವಿಧ ರಾಜ್ಯಗಳು ಮತ್ತು ಸಂಸದರ ಅಗತ್ಯಗಳಿಗೆ ಸ್ಪಂದಿಸುವಂತೆ ಸಹೋದ್ಯೋಗಿಗಳಿಗೆ ಸಲಹೆ ಮಾಡಿದ್ದಾರೆ. ಸರ್ಕಾರದ ಮುಂದಿನ ದಿಕ್ಕುದೆಸೆ ಕುರಿತು ಪ್ರಧಾನಿ ಜೂನ್ 4ರಿಂದ 11ರವರೆಗೆ ನಡೆಯುವ ಒಂದು ವಾರದ ಸಂಸತ್ ಅಧಿವೇಶನದ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯಿದೆ.
ಪ್ರತಿಯೊಂದು ಇಲಾಖೆಯ ಮೊದಲ ನೂರು ದಿನದ ಆದ್ಯತೆಗಳನ್ನು ಪಟ್ಟಿ ಮಾಡಿ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಪ್ರಧಾನಿ ಸೂಚಿಸಿದ್ದಾರೆಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ದಕ್ಷ– ಪರಿಣಾಮಕಾರಿ ಆಡಳಿತಕ್ಕೆ ಮಹತ್ವ ನೀಡಿ, ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಂತೆ ಕಿವಿಮಾತು ಹೇಳಿದ್ದಾರೆ ಎಂದರು.
ಸಂಪುಟ ಸಚಿವರು ರಾಜ್ಯ ಸಚಿವರಿಗೂ ಜವಾಬ್ದಾರಿ ಹಂಚಿಕೆ ಮಾಡಬೇಕು. ನಾವೂ ಆಡಳಿತದಲ್ಲಿ ಭಾಗಿಯಾಗಿದ್ದೇವೆ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಬೇಕು ಎಂದು ಮನವಿ ಮಾಡಿದ್ದಾರೆ. ಮುಂದಿನ ಎರಡು ದಿನದಲ್ಲಿ ಪ್ರಧಾನಿ ಎರಡನೇ ಸಭೆ ನಡೆಸಲಿದ್ದಾರೆ.
ಸಚಿವರು– ಇಲಾಖೆ ಕಾರ್ಯದರ್ಶಿಗಳನ್ನು ಮೇಲಿಂದ ಮೇಲೆ ಕರೆದು ಚರ್ಚಿಸಲಿದ್ದಾರೆಂದು ವೆಂಕಯ್ಯ ನಾಯ್ಡು ವಿವರಿಸಿದರು.
ಎನ್ಡಿಎ ಸರ್ಕಾರದ ಆದ್ಯತೆ: ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿರುವ ಬೆಲೆ ಏರಿಕೆ, ಮಹಿಳಾ ಭದ್ರತೆ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿ ಸಹಜವಾಗಿಯೇ ಎನ್ಡಿಎ ಸರ್ಕಾರದ ಆದ್ಯತೆ. ಜನರ ನಿರೀಕ್ಷೆಗಳು ಬೆಟ್ಟದಷ್ಟಿವೆ. ಅವರ ನಿರೀಕ್ಷೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
‘ನಮ್ಮದು ಒಕ್ಕೂಟ ವ್ಯವಸ್ಥೆ. ರಾಜ್ಯಗಳ ಅಗತ್ಯಗಳಿಗೆ ಸ್ಪಂದಿಸುವುದು ಸರ್ಕಾರದ ಗುಣ ಧರ್ಮ ಆಗಬೇಕು ಎನ್ನುವುದು ಪ್ರಧಾನಿ ಅವರ ನಂಬಿಕೆ’ ಎಂದು ಸಂಸದೀಯ ಸಚಿವರು ನುಡಿದರು.
ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದವರು. ರಾಜ್ಯಗಳು ಎಷ್ಟು ಮುಖ್ಯವೆನ್ನುವುದು ಅವರಿಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ಬೇಡಿಕೆಗಳಿಗೆ ಮಹತ್ವವಿರಬೇಕೆಂದು ಬಯಸುತ್ತಾರೆ ಎಂದು ನಾಯ್ಡು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.