ನವದೆಹಲಿ (ಪಿಟಿಐ): ನೇಪಾಳ ರಾಷ್ಟ್ರದ ಜೊತೆಗೆ ಭಾರತ ಹಂಚಿಕೊಂಡಿರುವ ಮುಕ್ತ ಗಡಿಯಲ್ಲಿನ ಸುಮಾರು 2700ಕ್ಕೂ ಅಧಿಕ ಗಡಿ ಕಲ್ಲುಗಳು ಒಂದೋ ‘ಕಾಣೆ’ಯಾಗಿವೆ ಇಲ್ಲವೇ ‘ಹಾನಿ’ಗೀಡಾಗಿದ್ದು, ದೇಶದ ಆಂತರಿಕ ಭದ್ರತೆಯ ಸವಾಲು ಹೆಚ್ಚಿಸಿದೆ.
ಮುಳ್ಳುತಂತಿ ಇಲ್ಲದಿರುವ 1751 ಕಿಲೋ ಮೀಟರ್ ಉದ್ದದ ಗಡಿಯಲ್ಲಿ ಮಾತ್ರವೇ ನಿರ್ಣಾಯಕ ಭದ್ರತಾ ವ್ಯವಸ್ಥೆಯ ಸ್ಥಿತಿ ಶೋಚನೀಯವಾಗಿಲ್ಲ. ಬದಲಾಗಿ ಭೂತಾನ್ ಗಡಿಯಲ್ಲೂ ಇದೇ ಪರಿಸ್ಥಿತಿಯಿದ್ದು, ಅಲ್ಲೂ ಸುಮಾರು 900 ಗಡಿ ಕಲ್ಲುಗಳು ಒಂದೋ ಹಾನಿಗೊಳಾಗಿವೆ ಇಲ್ಲವೇ ನಿರ್ಣಾಮ ಮಾಡಲಾಗಿದೆ.
ಕ್ಷೇತ್ರ ನಿಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಭದ್ರತಾ ಸಂಸ್ಥೆಗಳು ಕಳುಹಿಸಿರುವ ಇತ್ತೀಚಿನ ರಹಸ್ಯ ವರದಿಯ ಪ್ರಕಾರ (ಜೂನ್ 2014ರವರೆಗೆ), ಭಾರತ–ನೇಪಾಳ ಗಡಿಯಲ್ಲಿರುವ 1451 ಗಡಿ ಕಲ್ಲುಗಳು ‘ಕಾಣೆ’ಯಾಗಿದ್ದು, 1282 ಕಲ್ಲುಗಳನ್ನು ‘ಧ್ವಂಸ’ ಮಾಡಲಾಗಿದೆ.
ಸ್ಮಗ್ಲರ್ ಹಾಗೂ ಭಯೋತ್ಪಾದಕರ ಚಟುವಟಿಕೆಗಳಿಗೆ ಹೆಸರುವಾಸಿ ಎನಿಸಿರುವ ಈ ಸೀಮಾರೇಖೆಯಲ್ಲಿ ಒಟ್ಟು 6402 ಗಡಿ ಗುರುತುಗಳಿವೆ. ಗಸ್ತು ಹಾಗೂ ಪ್ರದೇಶವನ್ನು ಹಿಡಿತದಲ್ಲಿಡಲು ಗಡಿ ಕಾಯುವ ಪಡೆಯಾದ ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಅವುಗಳನ್ನು ಉಪಯೋಗಿಸುತ್ತದೆ.
ಅವುಗಳ ‘ಕಾಣೆ’ಯಿಂದಾಗಿ ಎಸ್ಎಸ್ಬಿ ಪಡೆಗಳು, ಗಸ್ತಿಗಾಗಿ ಕೆಲ ಸಮಯದಿಂದ ಜಿಪಿಎಸ್ ನಕ್ಷೆಗಳ ಮೊರೆ ಇಲ್ಲವೇ ಸ್ಥಳೀಯವಾಗಿ ನಿರ್ಮಿಸಿರುವ ಗುರುತುಗಳ ಮೊರೆ ಹೋಗುತ್ತಿದೆ.
ಗಡಿ ಕಲ್ಲುಗಳ ಕೊರತೆಯಿಂದಾಗಿ ಭಾರತದ ಭೂಪ್ರದೇಶದಲ್ಲಿ ಕನಿಷ್ಠ 14 ಸ್ಥಳಗಳಲ್ಲಿ ಅತಿಕ್ರಮಣ ನಡೆದಿದ್ದು, ನೇಪಾಳ ಕಡೆಗೂ ಅಷ್ಟೇ ಸಂಖ್ಯೆಯಲ್ಲಿ ಅತಿಕ್ರಮಣವಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಲಭಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ