ಬೆಂಗಳೂರು: ‘ಸುಪ್ರೀಂ ಕೋರ್ಟ್ ಪೀಠದಲ್ಲಿ ಸದ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ನ್ಯಾಯಮೂರ್ತಿಯೂ ಇಲ್ಲ. ಮಹಿಳೆಯರು ಹಾಗೂ ಹಿಂದುಳಿದ ವರ್ಗದವರ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಾಗಿಲ್ಲ. ಹೈಕೋರ್ಟ್ಗಳಲ್ಲೂ ಇದೇ ಪರಿಸ್ಥಿತಿ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು.
ನಗರದ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಸಹಯೋಗದಲ್ಲಿ ಲಾಯರ್ಸ್ ಫೋರಂ ಫಾರ್ ಸೋಷಿಯಲ್ ಜಸ್ಟೀಸ್ ಗುರುವಾರ ಆಯೋಜಿಸಿದ್ದ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ –2014’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘21 ವರ್ಷಗಳಷ್ಟು ಹಳೆಯದಾದ ನ್ಯಾಯಮೂರ್ತಿಗಳ ನೇಮಕಾತಿ ಶಿಫಾರಸು ಸಮಿತಿ (ಕೊಲಿಜಿಯಂ) ವ್ಯವಸ್ಥೆ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಈ ವ್ಯವಸ್ಥೆಯ ವೈಫಲ್ಯವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದು ಅವರು ಹೇಳಿದರು.
‘ಸದ್ಯದ ನೇಮಕಾತಿ ವಿಧಾನದಲ್ಲಿ ಪಾರದರ್ಶಕತೆ ಕೂಡ ಇಲ್ಲ. ಹಾಗಾಗಿ ಈ ವ್ಯವಸ್ಥೆ ಬದಲಾಯಿಸಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಲು ಹಿಂದಿನಿಂದ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಿ ಸೂಕ್ತ ಪರಿಹಾರ ಕಂಡುಕೊಳ್ಳಲು ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಯಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾಂತರು ಹಾಗೂ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಒದಗಿಸಿಕೊಡಲು ಪ್ರಯತ್ನ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.
ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಮಾತನಾಡಿ, ‘ನ್ಯಾಯಾಧೀಶರ ನೇಮಕದಲ್ಲಿ ಪಾರದರ್ಶಕತೆ ಇರಬೇಕು. ಕೆಳ ಸಮುದಾಯವರಿಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಸರಿಯಾದ ಪ್ರಾತಿನಿಧ್ಯ ಸಿಗದಿದ್ದಾಗ ಅದನ್ನು ಪ್ರಶ್ನಿಸುವ ಹಕ್ಕು ಜನರಿಗಿದೆ. ಅದಕ್ಕಾಗಿ ಸದ್ಯದ ವ್ಯವಸ್ಥೆ ಬದಲಾಗಬೇಕು. ಆದರೆ, ಚರ್ಚೆ, ಸಂವಾದ ಇಲ್ಲದೆ ಆಯೋಗ ರಚನೆಯಾಗುತ್ತಿದೆ’ ಎಂದರು.
ಅಮೆರಿಕದ ವ್ಯವಸ್ಥೆ ಮಾದರಿಯಾಗಬೇಕು: ‘ಕೊಲಿಯಂ ವ್ಯವಸ್ಥೆಗೆ ಮುನ್ನ 43 ವರ್ಷಗಳಲ್ಲಿ 111 ನ್ಯಾಯಮೂರ್ತಿ ಹಾಗೂ 30 ಮುಖ್ಯ ನ್ಯಾಯಮೂರ್ತಿಗಳ ನೇಮಕ ಮಾಡಲಾಗಿದೆ. ಕೊಲಿಜಿಯಂ ವ್ಯವಸ್ಥೆ ಜಾರಿಗೆ ಬಂದ ಮೇಲೆ 21 ವರ್ಷಗಳಲ್ಲಿ 107 ನ್ಯಾಯಮೂರ್ತಿ ಹಾಗೂ 11 ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿ ನಡೆದಿದೆ. ಸುಪ್ರೀಂ ಕೋರ್ಟ್ನಲ್ಲಿ ಸದ್ಯ ಶೇ 86ರಷ್ಟು ಹಿಂದೂಗಳು ಇದ್ದಾರೆ. ಹೆಚ್ಚಿನವರು ಸಾಮಾನ್ಯ ವರ್ಗಕ್ಕೆ ಸೇರಿದವರು. ಈಗಿರುವ ನ್ಯಾಯಾಧೀಶರಲ್ಲಿ ಶೇ 50ರಷ್ಟು ನ್ಯಾಯಮೂರ್ತಿಗಳು ಹಾಗೂ ವಕೀಲರ ಮಕ್ಕಳೇ ಇದ್ದಾರೆ. ಇದನ್ನು ಗಮನಿಸಿದರೆ ಎಲ್ಲಾ ವರ್ಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿದೆ ಎನಿಸುವುದಿಲ್ಲ’ ಎಂದು ರಾಜೀವ್ ಗಾಂಧಿ ಸಮಕಾಲೀನ ಅಧ್ಯಯನ ಸಂಸ್ಥೆ (ನವದೆಹಲಿ) ನಿರ್ದೇಶಕ ಪ್ರೊ. ಜಿ. ಮೋಹನ್ ಗೋಪಾಲ್ ಅವರು ವಿಶ್ಲೇಷಿಸಿದರು.
‘ಅಮೆರಿಕ ಸುಪ್ರೀಂ ಕೋರ್ಟ್ನಲ್ಲಿ 9 ನ್ಯಾಯಮೂರ್ತಿಗಳು ಇದ್ದಾರೆ. ಅವರಲ್ಲಿ ಎಲ್ಲರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಮೂವರು ಮಹಿಳೆಯರು ಇದ್ದಾರೆ. ಆ ದೇಶದಲ್ಲಿ ರಾಜಕೀಯ ನೇಮಕಾತಿ ವ್ಯವಸ್ಥೆ ಇದೆ. ಅದು ಪಾರದರ್ಶಕವಾಗಿ ನಡೆಯುತ್ತಿದೆ. ಈ ವ್ಯವಸ್ಥೆಯನ್ನು ಮಾದರಿಯಾಗಿಟ್ಟುಕೊಳ್ಳಬಹುದು’ ಎಂದು ಉದಾಹರಣೆ ಸಹಿತ ವಿವರಿಸಿದರು.
ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್, ‘ನ್ಯಾಯಾಧೀಶರು ಹೇಗೆ ಇರಬೇಕು ಎಂಬ ಪರಿಕಲ್ಪನೆ ಶತಮಾನಗಳಿಂದಲೂ ಇದೆ. ಮಹಾಭಾರತದಲ್ಲೂ ಈ ಬಗ್ಗೆ ಪ್ರಸ್ತಾಪವಿದೆ. ನನ್ನ ಪ್ರಕಾರ ನ್ಯಾಯಾಧೀಶರನ್ನು ನೇಮಕ ಮಾಡುವ ವ್ಯಕ್ತಿಯೂ ನ್ಯಾಯಾಧೀಶರಿಗೆ ಇರುವ ಅರ್ಹತೆ ಹೊಂದಿರಬೇಕು’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ವಿ.ಎಸ್. ಮಳಿಮಠ, ಎಂ.ಎನ್.ರಾವ್, ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ, ಹಿರಿಯ ವಕೀಲರಾದ ಎಸ್.ಎಸ್.ನಾಗಾನಂದ, ಜಯಕುಮಾರ್ ಎಸ್.ಪಾಟೀಲ್, ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಸಿಎಸ್ಎಸ್ಇಐಪಿ ನಿರ್ದೇಶಕ ಪ್ರೊ.ಎಸ್.ಜಾಫೆಟ್ ಹಾಗೂ ವಿವಿಧ ಕಾಲೇಜುಗಳ ಕಾನೂನು ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.