ಹಾಸನ: ಅರಕಲಗೂಡು ತಾಲ್ಲೂಕಿನಲ್ಲಿ ಸಂಬಂಧಿಕರಿಂದಲೇ ಅತ್ಯಾಚಾರಕ್ಕೆ ಒಳಗಾಗಿ, ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಾಲಕಿಯ ಕುಟುಂಬದವರು ಈಗ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿರುವುದು ಒಂದೆಡೆಯಾದರೆ, ಈ ಕುಟುಂಬಕ್ಕೆ ಊರಿನಲ್ಲಿಯೂ ಸಾಮಾಜಿಕವಾಗಿ ಕೆಲವು ಸಮಸ್ಯೆ ಎದುರಾಗಿವೆ. ಅತ್ಯಾಚಾರದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವ್ಯಕ್ತಿಯ ಮನೆಯವರು ಆಗಾಗ ಬಾಲಕಿಯ ಮನೆಯ ಮುಂದೆ ಜಗಳ ಕಾಯುತ್ತಾರೆ, ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಬಾಲಕಿಯ ಮನೆಯವರು ದೂರಿದ್ದಾರೆ.
ಈ ನಡುವೆ ಹಾಸನದಲ್ಲಿ ಅನಾಥ ಮಕ್ಕಳನ್ನು ದತ್ತು ಪಡೆಯುವ ಸಂಸ್ಥೆಯೊಂದು, ಈ ಬಾಲಕಿಯ ಮಗುವನ್ನು ಪಡೆಯುವ ಪ್ರಯತ್ನವನ್ನೂ ನಡೆಸಿದೆ ಎಂದು ಬಾಲಕಿ ದೂರಿದ್ದಾಳೆ.
‘ಪ್ರಜಾವಾಣಿ’ ಜತೆ ಸೋಮವಾರ ಮಾತನಾಡಿದ ಬಾಲಕಿ, ‘ಕಳೆದ ವಾರ ಹಾಸನದಿಂದ ವೈದ್ಯರೊಬ್ಬರು ಪತ್ನಿಸಹಿತ ಅಂಗನವಾಡಿಗೆ ಬಂದಿದ್ದರು. ‘ನಿನ್ನ ಮಗುವನ್ನು ಕೊಡು. ನಾವು ಸಾಕುತ್ತೇವೆ, ಇಲ್ಲದಿದ್ದಲ್ಲಿ ಮುಂದೆ ನಿನಗೆ ಸಮಸ್ಯೆಯಾಗುತ್ತದೆ’ ಎಂದು ಹೇಳಿದ್ದರು. ‘ಮಗುವನ್ನು ಕೊಡುವುದಿಲ್ಲ. ಮಗು ಕೇಳಲು ಬಂದರೆ ಪೊಲೀಸರಿಗೆ ಕರೆ ಮಾಡುತ್ತೇವೆ’ ಎಂದು ನನ್ನ ಜತೆಗಿದ್ದ ಅಂಗನವಾಡಿಯ ಕಾರ್ಯಕರ್ತೆ ಹೇಳಿದ್ದರಿಂದ ವೈದ್ಯರು ವಾಪಸಾದರು’ ಎಂದು ಬಾಲಕಿ ತಿಳಿಸಿದಳು.
‘ಇದಾಗಿ ಎರಡು ದಿನದಲ್ಲಿ ಮನೆಗೆ ಪೊಲೀಸರು ಬಂದಿದ್ದರು. ಹಿಂದೆ ನೀನು ಕೊಟ್ಟಿದ್ದ ಹೇಳಿಕೆ ಸರಿಯಾಗಿರಲಿಲ್ಲ. ನೀನು ಹೇಳಿದ ವ್ಯಕ್ತಿ ಅತ್ಯಾಚಾರ ಮಾಡಿಲ್ಲ ಎಂದು ವರದಿ ಬಂದಿದೆ, ಠಾಣೆಗೆ ಬಂದು ಬೇರೆ ಹೇಳಿಕೆ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಮಗುವನ್ನು ಸಾಕಲು ಕಷ್ಟವಾಗುವುದಾದರೆ ಹಾಸನದಿಂದ ಬಂದಿದ್ದ ವೈದ್ಯರಿಗೆ ಕೊಡು, ಅವರು ನೋಡಿಕೊಳ್ಳುತ್ತಾರೆ ಎಂದು ಪೊಲೀಸರು ಸಲಹೆ ನೀಡಿದರು. ಆದರೆ, ಕೊಡಲೇಬೇಕು ಎಂದು ಒತ್ತಾಯ ಮಾಡಲಿಲ್ಲ’ ಎಂದಿದ್ದಾಳೆ.
ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ನೀಡಿದ ಹೇಳಿಕೆ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಅವರಲ್ಲಿ ಒಬ್ಬರನ್ನು ಈಚೆಗೆ ಬಿಡುಗಡೆ ಮಾಡಲಾಗಿದೆ. ಇನ್ನೊಬ್ಬ ಆರೋಪಿ ಜೈಲಿನಲ್ಲಿದ್ದಾರೆ. ಡಿಎನ್ಎ ಪರೀಕ್ಷೆಗಾಗಿ ಇಬ್ಬರ ರಕ್ತದ ಮಾದರಿಯನ್ನೂ ಕಳುಹಿಸಲಾಗಿತ್ತು. ಆದರೆ, ಇನ್ನೂ ಡಿಎನ್ಎ ವರದಿ ಬಂದಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ನನ್ನ ಮೇಲೆ ಅತ್ಯಾಚಾರ ಮಾಡಿರುವ ವ್ಯಕ್ತಿಯ ಹೆಸರನ್ನು ನಾನು ಪೊಲೀಸರಿಗೆ ತಿಳಿಸಿದ್ದೇನೆ. ಅವನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನನ್ನ ಮಗುವನ್ನು ಯಾರಿಗೂ ಕೊಡುವುದಿಲ್ಲ, ಅದನ್ನು ಸಾಕಲು ನಾನು ಸಿದ್ಧ’ ಎಂದು ಬಾಲಕಿ ಹೇಳಿದ್ದಾಳೆ. ಬಾಲಕಿಯ ತಾಯಿಯೂ ‘ನಮ್ಮ ಮಗುವನ್ನು ನಾವೇ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.