ಪಂಪ ಪ್ರಶಸ್ತಿ ಪ್ರದಾನ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬನವಾಸಿ ಘಟಕ, ಕದಂಬ ಕನ್ನಡ ಸಂಘ, ಬನವಾಸಿ ವಲಯ ಅಭ್ಯುದಯ ಸಮಿತಿ ಮುಂತಾದವರು ವಿರೋಧ ವ್ಯಕ್ತಪಡಿಸಿರುವುದನ್ನು ‘ಪ್ರಜಾವಾಣಿ’ (ಮೇ 22) ಪತ್ರಿಕೆಯಲ್ಲಿ ಓದಿದೆ. ಅವರ ಆಕ್ಷೇಪಣೆ ನನಗೆ ಸರಿಯೆನಿಸುತ್ತದೆ
ಮೊಟ್ಟ ಮೊದಲ ಕನ್ನಡ ಸಾಮ್ರಾಜ್ಯ, ಆದಿಕವಿ ಪಂಪನ ಕಾರ್ಯಕ್ಷೇತ್ರ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು ಹೊರತು ಪಡಿಸಿದರೆ ಕದಂಬ ಸಾಮ್ರಾಜ್ಯದ ಯಾವ ಕುರುಹುಗಳೂ ಅಲ್ಲಿ ಕಾಣ ಸಿಗುವುದಿಲ್ಲ. ಈ ಕಾರಣದಿಂದ ಅಂದಿನ ಅಲ್ಲಿಯ ಕೆಲ ಪ್ರಮುಖರ ಒತ್ತಾಸೆಯ ಮೇರೆಗೆ ಮತ್ತು ಬನವಾಸಿ ನಾಡಿನ ಪ್ರಾಚೀನತೆಯನ್ನು ಸಾಂಸ್ಕೃತಿಕವಾಗಿ ಪರಿಚಯಿಸುವ ಸಲುವಾಗಿ, ೧೯೯೬ರಲ್ಲಿ ಕದಂಬೋತ್ಸವವನ್ನು ಆರಂಭಿಸಲಾಯಿತು.
ಆ ಸಂದರ್ಭದಲ್ಲಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿದ್ದೆ. ಈ ಉತ್ಸವವು ರಾಷ್ಟ್ರಮಟ್ಟದ ಗಮನ ಸೆಳೆಯಬೇಕೆಂಬುದು ಆಶಯವಾಗಿತ್ತು. ಜೊತೆಗೆ ಆದಿ ಕವಿ ಪಂಪನ ಹೆಸರಿನಲ್ಲಿ ಕೊಡಮಾಡುವ ಪಂಪ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಕೊಡಬೇಕೆಂಬುದು ಅಂದಿನ ಸರ್ಕಾರದ ನಿಲುವು.
ಕದಂಬೋತ್ಸವದ ಪ್ರಮುಖ ಆಕರ್ಷಣೆಯೇ ಪಂಪ ಪ್ರಶಸ್ತಿ ಪ್ರದಾನ, ಹಾಗೂ ಈ ನೆಪದಲ್ಲಿ ಮುಖ್ಯಮಂತ್ರಿಗಳನ್ನೂ ಒಳಗೊಂಡಂತೆ ಗಣ್ಯರು ಅಲ್ಲಿಗೆ ಭೇಟಿ ನೀಡುವುದು, ಅಲ್ಲದೇ ಆ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಆದರೆ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ತಾಲ್ಲೂಕು ಮಟ್ಟದ ಉತ್ಸವವಾಗಿ ಮಾರ್ಪಾಡಾಗಿರುವುದು ಶೋಚನೀಯ.
ಕಳೆದ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರ ಕ್ರಮದಿಂದಾಗಿ ರಾಜ್ಯಾದ್ಯಂತ ಹಲವಾರು ಉತ್ಸವಗಳಿಗೆ ಮರುಚಾಲನೆ ಸಿಕ್ಕಿದ್ದು ಸಂತೋಷದ ಸಂಗತಿ. ಆದರೆ ಇಂತಹ ಉತ್ಸವಗಳ ಹಿಂದಿನ ಮಹತ್ವ ಹಾಗೂ ಆಶಯಗಳನ್ನು ಬದಿಗೊತ್ತಿ ಉತ್ಸವಗಳು ಅರ್ಥಕಳೆದುಕೊಳ್ಳದಂತೆ ಎಚ್ಚರವಹಿಸುವುದು ಸೂಕ್ತ.