ಬೆಂಗಳೂರು: ಹಿರಿಯ ಪತ್ರಕರ್ತ ಎಂ.ವಿ.ಕಾಮತ್ (93) ಅವರು ಗುರುವಾರ (ಅ.9) ನಿಧನರಾದರು. ಅನಾರೋಗ್ಯ ಸಮಸ್ಯೆಯಿಂದ ಮಣಿಪಾಲ್ನ ಕಸ್ತೂರ ಬಾ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬೆಳಿಗ್ಗೆ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
‘ಬೆಳಿಗ್ಗೆ 7.30ರ ಸುಮಾರಿಗೆ ಅವರ ಹೃದಯ ಸ್ತಂಭನವಾಯಿತು’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.
‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ವಾಷಿಂಗ್ಟನ್ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ‘ದಿ ಇಲ್ಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದ ಸಂಪಾದಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
ರಸಾಯನ ಶಾಸ್ರಜ್ಞರಾಗಿ ವೃತ್ತಿ ಆರಂಭಿಸಿದ ಕಾಮತ್ ಅವರು ಬಳಿಕ ಮುಂಬೈನ ‘ಫ್ರೀ ಪ್ರೆಸ್ ಜರ್ನಲ್’ನ ವರದಿಗಾರರಾಗಿ ಪತ್ರಿಕೋದ್ಯಮಕ್ಕೆ ಪದಾರ್ಪಣೆ ಮಾಡಿದ್ದರು. 1953ರಲ್ಲಿ ಅವರು ‘ಬಾಂಬೆ ಯೂನಿಯನ್ ಆಫ್ ಜರ್ನಲಿಸ್ಟ್’ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
1921ರ ಸೆಪ್ಟೆಂಬರ್ 7ರಂದು ಉಡುಪಿಯಲ್ಲಿ ಜನಿಸಿದ ಕಾಮತ್ ಅವರು ಪ್ರಾಥಮಿಕ ಶಿಕ್ಷಣವನ್ನು ಮಣಿಪಾಲ್ನಲ್ಲಿ ಮುಗಿಸಿ, ನಂತರ ಬಿಎಸ್ಸಿ ಪದವಿ ಪಡೆದರು.
ಹಲವು ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದ ಕಾಮತ್ ಅವರು ‘ನರೇಂದ್ರ ಮೋದಿ– ದಿ ಆರ್ಕಿಟೆಕ್ಟ್ ಆಫ್ ಎ ಮಾಡರ್ನ್ ಸ್ಟೇಟ್’ (2009) ಮತ್ತಿತರ ಪುಸ್ತಕಗಳನ್ನು ರಚಿಸಿದ್ದಾರೆ.