ಬೆಂಗಳೂರು: ಪಶ್ಚಿಮಘಟ್ಟದಲ್ಲಿ14 ಹೊಸ ಪ್ರಭೇದಗಳ ಕುಣಿಯುವ ಕಪ್ಪೆಗಳನ್ನು ಗುರುತಿಸಿರುವ ಬೆನ್ನಹಿಂದೆಯೇ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು ಮತ್ತೊಂದು ಹೊಸ ಪ್ರಭೇದದ ಕಪ್ಪೆಯನ್ನು ಶೋಧಿಸಿದ್ದಾರೆ. ಮೊಟ್ಟೆಗಳನ್ನು ರಕ್ಷಿಸಲು ಮಣ್ಣಿನ ಲೇಪ ಮಾಡುವುದರಿಂದ ಈ ಪ್ರಭೇದ ಕಪ್ಪೆಗಳಿಗೆ ‘ಕುಂಬಾರ ಕಪ್ಪೆ’ ಎಂದು ಹೆಸರಿಸಲಾಗಿದೆ.
ಐಐಎಸ್ಸಿ ವಿಜ್ಞಾನಿಗಳಾದ ಡಾ. ಕೆ.ವಿ. ಗುರುರಾಜ, ಡಾ.ಕೆ.ಪಿ. ದಿನೇಶ್, ಮತ್ತು ಅಶೋಕ ಸಂಸ್ಥೆಯ ವಿಜ್ಞಾನಿಗಳಾದ ಪ್ರೀತಿ ಜಿ. ಹಾಗೂ ಡಾ. ಜಿ.ರವಿಕಾಂತ್ ಅವರ ತಂಡ ಈ ಪ್ರಭೇದವನ್ನು ಗುರುತಿಸಿದೆ.
ಜೋಗ ಜಲಪಾತದ ಹತ್ತಿರದಲ್ಲಿರುವ ಕತ್ತಲೆಕಾನದಲ್ಲಿ ಈ ಕಪ್ಪೆಯನ್ನು ಪ್ರಥಮ ಬಾರಿಗೆ ವಿಜ್ಞಾನಿಗಳು ನೋಡಿದ್ದಾರೆ. ನಿತ್ಯ ಹರಿದ್ವರ್ಣ ಕಾಡುಗಳು ಮತ್ತು ವರ್ಷ ಪೂರ್ತಿ ನೀರಿರುವ ಹಳ್ಳ, ತೊರೆಗಳು ಈ ಕಪ್ಪೆಗಳ ವಾಸಸ್ಥಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕಪ್ಪೆಯ ವಿಶೇಷ ಗುಣ ಲಕ್ಷಣಗಳೆಂದರೆ, ಹೆಣ್ಣು ಕಪ್ಪೆಗಳು ತಲೆ ಕೆಳಗಾಗಿ ನಿಂತು ಮೊಟ್ಟೆಗಳನ್ನಿಡುತ್ತದೆ. ತದನಂತರದಲ್ಲಿ ಗಂಡು ಕಪ್ಪೆಯು ಈ ಮೊಟ್ಟೆಗಳಿಗೆ ತೊರೆಯಿಂದ ತೆಗೆದ ಮಣ್ಣನ್ನು ಹಚ್ಚುತ್ತದೆ. ಕಪ್ಪೆಗಳಲ್ಲಿ ಇಂತಹ ವರ್ತನೆ ಕಂಡುಬಂದಿದ್ದು ಇದೇ ಮೊದಲ ಸಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹಾಗಾಗಿ ಈ ಪ್ರಭೇದಕ್ಕೆ 'ಕುಂಬಾರ' ಕಪ್ಪೆ ಎಂದೇ ಹೆಸರಿಡ ಲಾಗಿದೆ.
ಪಶ್ಚಿಮಘಟ್ಟ ಜೀವವೈವಿಧ್ಯ ತಾಣವಾಗಿದ್ದು, ಹಲವು ಪ್ರಭೇದಗಳ ಕಪ್ಪೆಗಳಿಗೂ ತಾವು ಒದಗಿಸಿದೆ. ಗಂಡು ಕುಂಬಾರ ಕಪ್ಪೆಗಳು ಒಂದುಗೂಡಲು ಹೆಣ್ಣನ್ನು ಕರೆಯುವಾಗ ‘ಟೊಕ್ ಟೊಕ್’ ಎಂಬ ವಿಶಿಷ್ಟ ಸದ್ದು ಹೊರಡಿಸುತ್ತವೆ. ಅದಕ್ಕೆ ಹೆಣ್ಣು ಕಪ್ಪೆಗಳು ಓಗೊಡುತ್ತವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
‘ತಮ್ಮ ಸಂತತಿಯನ್ನು ಉಳಿಸಲು ಈ ಕಪ್ಪೆಗಳು ಅಷ್ಟೊಂದು ಜಾಗರೂಕತೆಯಿಂದ ಮೊಟ್ಟೆಗಳನ್ನು ಕಾಯುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.