ನವದೆಹಲಿ (ಪಿಟಿಐ): ಇಸ್ಲಾಮಾಬಾದ್ ನಲ್ಲಿ ಆಗಸ್ಟ್ 4ರಂದು ನಡೆಯಲಿರುವ ಸಾರ್ಕ್ ರಾಷ್ಟ್ರಗಳ ಗೃಹಸಚಿವರ 7ನೇ ಸಮ್ಮೇಳನದಲ್ಲಿ ರಾಜನಾಥ್ ಸಿಂಗ್ ಅವರು ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ.
ಆದರೆ, ಎರಡು ದಿನಗಳ ಭೇಟಿಯಲ್ಲಿ ರಾಜನಾಥ್ ಅವರು ಪಾಕಿಸ್ತಾನದ ಗೃಹ ಸಚಿವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಪಠಾಣ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆದ ನಂತರ ಇದೇ ಮೊದಲ ಬಾರಿಗೆ ಹಿರಿಯ ಸಚಿವರೊಬ್ಬರು ಇಸ್ಲಾಮಾಬಾದ್ಗೆ ಭೇಟಿ ನೀಡುತ್ತಿದ್ದು, ಎರಡೂ ರಾಷ್ಟ್ರಗಳ ನಡುವಣ ಸಂಬಂಧ ಹದಗೆಟ್ಟಿರುವುದರಿಂದ ದ್ವಿಪಕ್ಷೀಯ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಸ್ವರೂಪ್ ಸ್ಪಷ್ಟಪಡಿಸಿದ್ದಾರೆ.
ಸಾರ್ಕ್ ಗೃಹ ಸಚಿವರ ಸಮ್ಮೇಳನ ದಲ್ಲಿ ರಾಜನಾಥ್ ಸಿಂಗ್ ಅವರು ಗಡಿಯಾಚೆಗಿನ ಭಯೋತ್ಪಾದನೆಯನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸುವುದರ ಜತೆಗೆ ಮುಂಬೈ ದಾಳಿಯ ಸಂಚು ಕೋರರ ವಿಚಾರಣೆ ವಿಳಂಬ ಆಗುತ್ತಿ ರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ನೆರೆಯ ರಾಷ್ಟ್ರಗಳ ಜತೆ ಉತ್ತಮ ಸಂಬಂಧದ ನೀತಿ ಮತ್ತು ಸಾರ್ಕ್ ದೇಶಗಳ ಪ್ರಾದೇಶಿಕ ಸಹಕಾರ ವೃದ್ಧಿಯ ಉದ್ದೇಶದಿಂದ ಗೃಹ ಸಚಿವರು ಅಲ್ಲಿಗೆ ತೆರಳುತ್ತಿದ್ದಾರೆ ಎಂದು ವಿದೇಶಾಂಗ ವಕ್ತಾರರು ಹೇಳಿದ್ದಾರೆ.