ಜಮ್ಮು (ಪಿಟಿಐ): ಗಡಿ ನಿಯಂತ್ರಣ ರೇಖೆಯ ಬಳಿ ನೆಲ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಯಲ್ಲಿ ಭಾರತದ ಸೇನೆಯ ಯೋಧನೊಬ್ಬ ಸತ್ತಿದ್ದು ಕರ್ನಾಟಕದ ಯೋಧ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಅಖನೂರ್ ಬಳಿ ಗಡಿ ನಿಯಂತ್ರಣ ರೇಖೆಗುಂಟ ಗಸ್ತು ತಿರುಗುತ್ತಿದ್ದ ಭಾರತದ ಸೈನಿಕರನ್ನು ಗುರಿಯಾಗಿಟ್ಟುಕೊಂಡು ಭಾನುವಾರ ನೆಲಬಾಂಬ್ ಸ್ಫೋಟಿಸಿ ಗುಂಡಿನ ದಾಳಿ ನಡೆಸಲಾಗಿದೆ.
ಪಾಕಿಸ್ತಾನದ ಗಡಿ ಕಾರ್ಯ ಪಡೆ ‘ಬ್ಯಾಟ್’ ತಂಡವೇ ಈ ಕೃತ್ಯ ಎಸಗಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಜಮ್ಮುವಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ನಡೆದ ಕೂಡಲೇ ಭಾರತದ ಸೈನಿಕರು ಪ್ರತಿಯಾಗಿ ಗುಂಡು ಹಾರಿಸಿದ್ದರಿಂದ ‘ಬ್ಯಾಟ್’ ಸಿಬ್ಬಂದಿ ಗಡಿ ನಿಯಂತ್ರಣ ರೇಖೆಯ ಬಳಿಯಿಂದ ಪರಾರಿಯಾದರು ಎಂದು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಹುತಾತ್ಮನಾದ ಯೋಧನನ್ನು ಭಿಕಲೆ ಉತ್ತಮ್ ಬಾಲು ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರು ಯೋಧರನ್ನು ಹೆಲಿಕಾಪ್ಟರ್ ಮೂಲಕ ಉಧಮ್ಪುರ ಸೇನಾ ಆಸ್ಪತ್ರಗೆ ಸಾಗಿಸಲಾಗಿದೆ. ಗಾಯಗೊಂಡವರನ್ನು ಕರ್ನಾಟಕದ ಹವಾಲ್ದಾರ್ ವಿನೋದ್ ಕುಮಾರ್ ಮತ್ತು ಕೇರಳದ ಅಮುಲ್ ಕುಮಾರ್ ಎಂದು ಗುರುತಿಸಲಾಗಿದೆ.
ದಾಳಿ ನಡೆದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ ನೆಲಬಾಂಬ್ ಹುದುಗಿಸಿಡಲು ಹೊಂಡಗಳನ್ನು ತೋಡಿರುವುದು ಪತ್ತೆಯಾಗಿದ್ದು, ಇದು ‘ಬ್ಯಾಟ್’ ನಡೆಸಿದ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ. ಪಾಕಿಸ್ತಾನದ ವಿಶೇಷ ಪಡೆಯ ಸಿಬ್ಬಂದಿ ಮತ್ತು ಭಯೋತ್ಪಾದಕರನ್ನು ಒಳಗೊಂಡ ‘ಬ್ಯಾಟ್’ ಕಳೆದ ವರ್ಷ ಇಬ್ಬರು ಭಾರತೀಯ ಯೋಧರನ್ನು ಬರ್ಬರವಾಗಿ ಹತ್ಯೆ ಮಾಡಿತ್ತು.
ಭಯೋತ್ಪಾದಕರ ಗುಂಡಿಗೆ ಯೋಧ ಬಲಿ
ಶ್ರೀನಗರ ವರದಿ: ಬುದ್ಗಾಮ್ ಜಿಲ್ಲೆಯ ಕೌಸರಮುಲ್ಲಾ ಗ್ರಾಮದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಸತ್ತಿದ್ದು, ಮೂವರು ಗಾಯಗೊಂಡಿದ್ದಾರೆ.