ಜಮ್ಮು, ಉದಾಂಪುರ(ಪಿಟಿಐ, ಐಎಎನ್ ಎಸ್): ಭಾರತೀಯ ಸೇನೆ-ಉಗ್ರರ ಮಧ್ಯೆ ಗುಂಡಿನ ಕಾಳಗ ನಡೆದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಸೇನೆ ಕೆಲ ಸುತ್ತು ಗುಂಡಿನ ದಾಳಿ ನಡೆಸಿ ಜಮ್ಮುವಿನ ಅರ್ನಿಯ ವಲಯದ ಅಂತರರಾಷ್ಟ್ರೀಯ ಗಡಿಯಲ್ಲಿ ಶುಕ್ರವಾರ ಕದನ ವಿರಾಮ ಉಲ್ಲಂಘಿಸಿದೆ.
ಪಾಕಿಸ್ತಾನದ ಸೇನೆ ಅರ್ನಿಯ ಉಪ ವಲಯದಲ್ಲಿ ಸೇನೆಯ ಉಪ ಠಾಣೆಗಳನ್ನು ಗುರಿಯಾಗಿರಿಕೊಂಡು ಐದು ಸುತ್ತು ಗುಂಡಿನ ದಾಳಿ ನಡೆಸಿದೆ. ಗುಂಡಿನ ದಾಳಿ ವೇಳೆ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಭಾರತೀಯ ಗಡಿ ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣಾ ಪ್ರಚಾರ ಕೈಗೊಂಡಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ.
ಗುಂಡಿನ ಕಾಳಗ: ಮೃತರ ಸಂಖ್ಯೆ 11ಕ್ಕೆ ಏರಿಕೆ
ಅರ್ನಿಯ ವಲಯದ ಅಂತರ ರಾಷ್ಟ್ರೀಯ ಗಡಿಯಲ್ಲಿ ಸೇನೆ ಮತ್ತು ಉಗ್ರರ ಮಧ್ಯೆ ಗುರುವಾರ ಮತ್ತು ಶುಕ್ರವಾರ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ.
ಗುಂಡಿನ ಕಾಳಗದಲ್ಲಿ ಮೃತಪ್ಟಟ ಕೆಲವರ ಶವಗಳನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ. ಕಾಳಗದಲ್ಲಿ ನಾಲ್ವರು ನಾಗರಿಕರು ಸೇರಿದಂತೆ ಮೂವರು ಯೋಧರು, ನಾಲ್ವರು ಉಗ್ರರು ಮೃತಪಟ್ಟಿದ್ದಾರೆ, ಹಲವರು ಗಾಯಗೊಂಡಿದ್ದಾರೆ ಎಂದು ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.