ಪಿಎಚ್.ಡಿ ಪ್ರವೇಶ ನಿಯಮಗಳಿಗೆ ತಿದ್ದುಪಡಿ ಮಾಡಿ ವಿವಾದಕ್ಕೆ ಸಿಲುಕಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ಈಗ ತಿದ್ದುಪಡಿಗಳನ್ನು ಕೈಬಿಟ್ಟು ಹೊಸ ನಿರ್ಧಾರಗಳನ್ನು ಕೈಗೊಂಡಿದೆ. ಕೆ ಎಸ್ಓಯು ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಂಡಿರುವುದು ಸರಿಯಾದ ಕ್ರಮ. ಅಧಿಕಾರದಲ್ಲಿರುವ ರಾಜಕಾರಣಿಗೆ ಪಿಎಚ್.ಡಿ. ನೀಡಲು ಅನುಕೂಲವಾಗುವಂತೆ ಒಂದು ವರ್ಷದ ಮಟ್ಟಿಗೆ ವಿಶ್ವವಿದ್ಯಾಲಯದ ನಿಯಮಗಳನ್ನೇ ತಿದ್ದುಪಡಿ ಮಾಡಿದ್ದು ಅಕ್ಷಮ್ಯ.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಕಟ್ಟುನಿಟ್ಟಿನ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸಿದ ಈ ಕ್ರಮ ಮುಕ್ತ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಕಳಂಕವಾಗಿ ಉಳಿದುಕೊಳ್ಳಲಿದೆ. ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ಅನುಕೂಲ ಮಾಡಿಕೊಡಲು ಪ್ರಸಕ್ತ ವರ್ಷಕ್ಕಷ್ಟೇ ಪಿಎಚ್. ಡಿ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿತ್ತು ಎಂಬ ವಿಚಾರವಂತೂ ವಿಶ್ವವಿದ್ಯಾಲಯದ ಘನತೆ, ಗೌರವಕ್ಕೆ ಮಸಿ ಬಳೆಯುವಂತಹದ್ದು. ಪಿಎಚ್ ಡಿ ಮೌಖಿಕ ಪರೀಕ್ಷೆಗೆ ಅರ್ಹತೆ ಪಡೆಯಲು ಪ್ರವೇಶ ಪರೀಕ್ಷೆಯಲ್ಲಿ ಪಡೆಯಬೇಕಾದಅಂಕಗಳ ಪ್ರಮಾಣವನ್ನು ಶೇ 50 ರಿಂದ ಶೇ 40ಕ್ಕೆ ಇಳಿಸಲಾಗಿತ್ತು.
ಇದಕ್ಕೆ ಕಾರಣ ಸಚಿವೆ ಉಮಾಶ್ರೀ ಅವರು ಪಡೆದ ಅಂಕಗಳು ಶೇ 43 ಆಗಿತ್ತು. ಹಾಗೆಯೇ ಯುಜಿಸಿ ನಿಯಮಗಳ ಪ್ರಕಾರ, ಪಿಎಚ್. ಡಿ ಅಭ್ಯರ್ಥಿಗಳು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆಯಬೇಕಾದುದು ಕಡ್ಡಾಯ. ಆದರೆ ಉಮಾಶ್ರೀ ಮುಕ್ತ ವಿಶ್ವವಿದ್ಯಾಲಯದಿಂದ ನೇರವಾಗಿ ಸ್ನಾತಕೋತ್ತರ ಪದವಿ ಪಡೆದವರಾಗಿದ್ದಾರೆ. ಇದಕ್ಕಾಗಿ ಇದೊಂದು ವರ್ಷದ ಮಟ್ಟಿಗೆ ನೇರ ಸ್ನಾತಕೋತ್ತರ ಪದವಿ ಪಡೆದವರಿಗೂ ಪಿಎಚ್.ಡಿ ಪ್ರವೇಶಕ್ಕೆ ಅರ್ಹತೆ ಕಲ್ಪಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕೇಳಿಬರುವುದು ಸಹಜವೇ.
‘ನ ಹಿ ಜ್ಞಾನೇನ ಸದೃಶಂ’ ಎಂಬಂತಹ ಸಂಸ್ಕೃತ ಸೂಕ್ತಿಯನ್ನು ಮರೆಯಲಾದೀತೆ? ಜ್ಞಾನಕ್ಕೆ ಸಮನಾದುದು ಬೇರೊಂದಿಲ್ಲ. ಸಂಶೋಧನೆಯಿಂದ ಹೊಸ ಜ್ಞಾನದ ಸಂಪಾದನೆ ಸಾಧ್ಯವಾಗಬೇಕು. ಅಥವಾ ಈಗಿರುವ ಜ್ಞಾನಸಂಪತ್ತಿನ ಹೊಸ ಹೊಸ ಆಯಾಮಗಳ ಅನ್ವೇಷಣೆ ಸಂಶೋಧನೆಗಳಿಂದ ಸಾಧ್ಯವಾಗಬೇಕು. ಇಂತಹ ವಿಚಾರಗಳಲ್ಲಿ ರಾಜಕೀಯದ ಪ್ರವೇಶ, ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಳ ಗುಣಮಟ್ಟ ಹಾಳುಗೆಡವುತ್ತದೆ. ಪಿಎಚ್.ಡಿ ಪದವಿಯ ಘನತೆ ಹಾಗೂ ಗಾಂಭೀರ್ಯವನ್ನು ಇದು ಕುಗ್ಗಿಸುತ್ತದೆ.
ಈಗಾಗಲೇ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ ಪಡೆಯುವುದು ಒಂದು ದಂಧೆ ಎಂಬ ಮಟ್ಟಕ್ಕೆ ಹೋಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಮೌಲಿಕವಾದ ಸಂಪ್ರಬಂಧಗಳು ಭಾರತದ ವಿಶ್ವವಿದ್ಯಾಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿಲ್ಲ ಎಂಬಂತಹ ಕೂಗು ಎದ್ದು ಬಹಳ ಕಾಲವಾಯಿತು. ಈ ಹೀನಾಯ ಸ್ಥಿತಿಯನ್ನು ಸರಿಪಡಿಸಲು ಪಿಎಚ್.ಡಿ ಆಯ್ಕೆ ವ್ಯವಸ್ಥೆ ಹಾಗೂ ಮೌಲ್ಯಮಾಪನ ಕ್ರಮಗಳಲ್ಲಿ ಬದಲಾವಣೆಗಳಾಗಬೇಕು .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.