ಬೆಂಗಳೂರು: ಪುರಾತತ್ವ ಇಲಾಖೆಯ ಕಚೇರಿಯೊಂದನ್ನು ವಿಜಯಪುರದಲ್ಲಿ ಆರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
‘ವಿಜಯಪುರ ಜಿಲ್ಲೆಯು ಇಸ್ಲಾಮಿಕ್ ವಾಸ್ತುಶೈಲಿ ಕಟ್ಟಡಗಳ ಖಜಾನೆಯಂತಿದೆ. ಆದಿಲ್ಶಾಹಿ ಸಾಮ್ರಾಜ್ಯದ ಕಾಲದ ಸ್ಮಾರಕಗಳು ಇಲ್ಲಿವೆ’ ಎಂದು ಪಾಟೀಲ ಅವರು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಈ ಜಿಲ್ಲೆಯಲ್ಲಿರುವ 81 ಸಂರಕ್ಷಿತ ಸ್ಮಾರಕಗಳು ಪುರಾತತ್ವ ಇಲಾಖೆಯ ಧಾರವಾಡದ ಕಚೇರಿಯ ವ್ಯಾಪ್ತಿಗೆ ಬರುತ್ತವೆ. ವಿಜಯಪುರ ಜಿಲ್ಲೆಯ ಸ್ಮಾರಕಗಳು ಒತ್ತುವರಿಗೆ ಒಳಗಾಗುವ ಸಾಧ್ಯತೆ ಇದೆ. ಹಾಗಾಗಿ, ಇಲಾಖೆಯ ಕಚೇರಿಯೊಂದನ್ನು ಇಲ್ಲಿಯೇ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.