ನವದೆಹಲಿ (ಪಿಟಿಐ): 2010ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರುಷತ್ವ ಪರೀಕ್ಷೆ ಹಾಜರಾಗುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ನಿತ್ಯಾನಂದ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಈ ಮೂಲಕ ನಿತ್ಯಾನಂದ ಸ್ವಾಮೀಜಿ ಅವರು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವುದು ಅನಿರ್ವಾಯತೆ ಎದುರಾಗಿದೆ.
ನಿತ್ಯಾನಂದ ಸ್ವಾಮೀಜಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ ಸುಪ್ರೀಂ ಕೋರ್ಟ್ನ ಪೀಠ, ಮನವಿಯನ್ನು ತಿರಸ್ಕರಿಸಿ ಅರ್ಜಿಯನ್ನು ವಜಾಗೊಳಿಸಿತು.
ಆಗಸ್ಟ್ 20ರಂದು ನಡೆದಿದ್ದ ವಿಚಾರಣೆ ವೇಳೆ ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಲು ಕಾರಣವೇನು ಎಂದು ನಿತ್ಯಾನಂದ ಅವರನ್ನು ಪ್ರಶ್ನಿಸಿದ್ದ ನ್ಯಾಯಪೀಠವು, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಇಂಥ ಪರೀಕ್ಷೆಗಳ ಅಗತ್ಯ ದಿನದಿನಕ್ಕೂ ಹೆಚ್ಚುತ್ತಿದೆ ಎಂದು ಅಭಿಪ್ರಾಯ ಪಟ್ಟಿತ್ತು.