ಶಿವಮೊಗ್ಗ: ಜಿಲ್ಲೆಯ ಹಲವು ಕೆರೆಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸ ಲಾಗುವುದು. ಮೊದಲ ಹಂತದಲ್ಲಿ ಸೋಮಿನಕೊಪ್ಪ ಹಾಗೂ ಭದ್ರಾವತಿ ಜನ್ನಾಪುರ ಕೆರೆ ಕಾಮಗಾರಿ ಕೈಗೆತ್ತಿಕೊಳ್ಳ ಲಾಗುವುದು ಎಂದು ‘ಸೂಡಾ’ ಅಧ್ಯಕ್ಷ ಎನ್.ರಮೇಶ್ ತಿಳಿಸಿದರು.
ಶಿವಮೊಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿ ಎನ್.ರಮೇಶ್ ಅಧಿಕಾರ ವಹಿಸಿ ಕೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಸೂಡಾ’ ಕಚೇರಿಯಲ್ಲಿ ಬುಧವಾರ ಕಾರ್ಯಪ್ರಗತಿಯ ಪಕ್ಷಿನೋಟ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸೋಮಿನಕೊಪ್ಪ ಕೆರೆ 94 ಎಕರೆ ವಿಸ್ತೀರ್ಣ ಹೊಂದಿದೆ. ಭದ್ರಾವತಿಯ ಜನ್ನಾಪುರ ಕೆರೆ 45 ಎಕರೆ ವಿಸ್ತಾರ ವಾಗಿದೆ. ಮೊದಲ ಹಂತದಲ್ಲಿ ಈ ಎರಡೂ ಕೆರಗಳನ್ನು ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾಗುವುದು ಎಂದರು.
ಸೋಮಿನಕೊಪ್ಪ ಕೆರೆಯ ಮಧ್ಯೆ ಕೃತಕ ದ್ವೀಪ ನಿರ್ಮಿಸಲಾಗುವುದು. ಬೋಟಿಂಗ್, ವಾಕಿಂಗ್ ಪಾಥ್ ನಿರ್ಮಾಣ ಸೇರಿದಂತೆ ವಿವಿಧ ಸೌಕರ್ಯ ಒದಗಿಸಲಾಗುವುದು ಎಂದರು.
ಒಂದು ವರ್ಷದ ಅವಧಿಯಲ್ಲಿ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳಿಗೆ ಸಾರ್ವಜನಿಕ ಉಪಯೋಗ ಕ್ಕಾಗಿ 17 ನಿವೇಶನ ನೀಡಲಾಗಿದೆ.
ಪ್ರಾಧಿಕಾರದ ಕಚೇರಿ ಕಟ್ಟಡಕ್ಕೆ ಮಹಾನಗರ ಪಾಲಿಕೆಯಿಂದ ಖಾತೆ ಆಗದೇ ಇರುವ ಕಾರಣ ನಿಯಮಾನು ಸಾರ ಖಾತೆ ದಾಖಲೆಗೊಳಿಸಿ ಕಂದಾಯ ನಿಗದಿಪಡಿಸಿಕೊಳ್ಳಲಾಗಿದೆ. ಕಚೇರಿ ಕಟ್ಟಡ ವಿಸ್ತರಿಸಲಾಗುತ್ತಿದೆ ಎಂದು ವಿವರ ನೀಡಿದರು.
ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಹಲವು ಮೂಲ ಸೌಲಭ್ಯ ಒದಗಿಸಲು ಪ್ರಾಧಿಕಾರ ನಿರ್ಧರಿಸಿದೆ. ಕುವೆಂಪು ಬಡಾವಣೆ, ಊರುಗಡೂರು, ಬಸವೇಶ್ವರ, ಆನಂದ ರಾವ್ ಬಡಾವಣೆ, ಚಾಲುಕ್ಯ ನಗರ ಹಾಗೂ ಇಂದಿರಾ ಗಾಂಧಿ ಬಡಾವಣೆಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುತ್ತಿದೆ. ಭದ್ರಾವತಿಯ ನ್ಯೂಟೌನ್ ಚರ್ಚ್ ಮುಂಭಾಗ, ಹುತ್ತಾ ಕಾಲೊನಿ, ದರ್ಗಾ ಮುಂಭಾಗ ಶೀಘ್ರ ಹೈಮಾಸ್ಕ್ ದೀಪ ಅಳವಡಿಸಲಾಗುವುದು ಎಂದರು. ‘ಸೂಡಾ’ ಸದಸ್ಯ ಸೈಯದ್ ಅಸ್ಗರ್ ಆಲಿ, ಆಯುಕ್ತ ಕರಭೀಮಣ್ಣನವರ್ ಉಪಸ್ಥಿತರಿದ್ದರು.