ಚಿತ್ರದುರ್ಗ: ಪ್ರೀತಿಯ ಬಲೆಗೆ ಬಿದ್ದು ತುಮಕೂರಿಗೆ ಹೊರಟಿದ್ದ ಶಿವಮೊಗ್ಗ ಮತ್ತು ಭದ್ರಾವತಿಯ ಬಾಲಕಿಯರಿಬ್ಬರನ್ನು ಚಿತ್ರದುರ್ಗದ ಅಂಗನವಾಡಿ ಸಹಾಯಕಿಯೊಬ್ಬರು ರಕ್ಷಿಸಿ ಜಿಲ್ಲಾ ಸಾಂತ್ವನ ಕೇಂದ್ರದ ವಶಕ್ಕೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ. ಸಂಜೆ ಇವರಿಬ್ಬರನ್ನು ಪೋಷಕರಿಗೆ ಒಪ್ಪಿಸಲಾಯಿತು.
ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದ ಈ ಶಾಲಾ ಬಾಲಕಿಯರು, ಚಿತ್ರದುರ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ತಡರಾತ್ರಿ ಇಳಿದಿದ್ದಾರೆ. ಶಿವಮೊಗ್ಗದಲ್ಲಿ ಒಂದೇ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಈ ಬಾಲಕಿಯರನ್ನು ಬಸ್ ನಿಲ್ದಾಣದಲ್ಲಿ ಕಂಡು ಸಂಶಯಗೊಂಡ ಮುಖ್ಯ ಶಿಕ್ಷಕಿಯೊಬ್ಬರು ಕರೆದು ವಿಚಾರಿಸಿದ್ದಾರೆ.
‘ನಾವು ಕೃಷಿ ವಿಜ್ಞಾನ ಓದುತ್ತಿದ್ದು, ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದೇವೆ. ಇಲ್ಲಿ ನಮಗೆ ಯಾರೂ ಪರಿಚಯದವರಿಲ್ಲ; ಉಳಿದುಕೊಳ್ಳಲು ಅವಕಾಶ ಮಾಡಿಕೊಡಿ’ ಎಂದು ಬಾಲಕಿಯರು ಕಥೆ ಹೆಣೆದಿದ್ದಾರೆ. ಕೊನೆಗೆ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಅಂಗನವಾಡಿ ಸಹಾಯಕಿ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ಶುಕ್ರವಾರ ಚಿತ್ರದುರ್ಗದ ಬಸವೇಶ್ವರ ವಿದ್ಯಾಸಂಸ್ಥೆಯ ಜಿಲ್ಲಾ ಸಾಂತ್ವನ ಕೇಂದ್ರಕ್ಕೆ ಬಾಲಕಿಯರನ್ನು ಕರೆದುಕೊಂಡು ಹೋಗಿದ್ದಾರೆ.
ಪ್ರೇಮ ಪ್ರಕರಣ: ಕೇಂದ್ರದ ಆಪ್ತ ಸಲಹೆಗಾರರಾದ ಮಂಜುಳಾ ಮತ್ತು ಶಂಕರಪ್ಪ ಅವರು, ಬಾಲಕಿಯರನ್ನು ಕೌನ್ಸೆಲಿಂಗ್ಗೆ ಒಳಪಡಿಸಿದಾಗ ಆರಂಭದಲ್ಲಿ ಸುಳ್ಳು ಹೇಳಿದ ಬಾಲಕಿಯರು ನಂತರ ಸತ್ಯಾಂಶ ಬಿಚ್ಚಿಟ್ಟಿದ್ದಾರೆ. ಒಬ್ಬ ವಿದ್ಯಾರ್ಥಿನಿ, ಪೇಂಟರ್ ಒಬ್ಬನನ್ನು ಪ್ರೀತಿಸುತ್ತಿದ್ದು, ಪೋಷಕರಿಗೆ ವಿಷಯ ತಿಳಿದ ಕಾರಣ ಮನೆ ಬಿಟ್ಟು ಬಂದಿರುವುದಾಗಿ ಬಹಿರಂಗಪಡಿಸಿದ್ದಾಳೆ ಎಂದು ಶಂಕರಪ್ಪ ಹೇಳಿದರು.
ಮತ್ತೊಬ್ಬಳು, ‘ನಾನು ಆಟೊ ಚಾಲಕನನ್ನು ಪ್ರೀತಿಸುತ್ತಿದ್ದೆ. ಆತ ನಿತ್ಯ ನನ್ನನ್ನು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದ. ಒಂದು ದಿನ ಹಣ್ಣಿನ ರಸದಲ್ಲಿ ಮತ್ತೇರಿಸುವ ಔಷಧಿ ಬೆರೆಸಿ ನನ್ನ ಮೇಲೆ ದೌರ್ಜನ್ಯ ಮಾಡಲು ಪ್ರಯತ್ನಿಸಿದ. ಘಟನೆ ಬಳಿಕ ನಾನು ಆತನ ಸಹವಾಸ ಕೈಬಿಟ್ಟೆ. ನಂತರ ತುಮಕೂರಿನಿಂದ ಮೊಬೈಲ್ ಮೂಲಕ ಅಪರಿಚಿತನ ಪರಿಚಯವಾಗಿ ಅವನನ್ನು ಪ್ರೀತಿಸುತ್ತಿದ್ದೇನೆ. ಈಗ ಆತನನ್ನು ಭೇಟಿಯಾಗಲು ಹೊರಟಿದ್ದೇನೆ’ ಎಂದಿದ್ದಾಳೆ.
ಸಾಂತ್ವನ ಕೇಂದ್ರದವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ವಿದ್ಯಾರ್ಥಿನಿಯರು, ‘ನಾವಷ್ಟೇ ಅಲ್ಲ, ಇದೇ ರೀತಿ ಅನೇಕ ಗೆಳತಿಯರು ಪ್ರೇಮದ ಬಲೆಯಲ್ಲಿ ಬಿದ್ದಿದ್ದಾರೆ’ ಎಂಬ ಆತಂಕಕಾರಿ ಮಾಹಿತಿ ನೀಡಿದ್ದಾರೆ. ಬಾಲಕಿಯರನ್ನು ಅವರ ತಂದೆ– ತಾಯಿ ಕರೆದುಕೊಂಡು ಹೋಗಿದ್ದಾರೆ. ‘ಹಿಂದೆ ನಾವು ಬುದ್ಧಿ ಹೇಳಿದ್ದೇವೆ. ಮುಂದೆ ಎಚ್ಚರಿಕೆ ವಹಿಸುತ್ತೇವೆ. ಇವರಿಬ್ಬರನ್ನು ಪ್ರೇಮಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಪೋಷಕರು ತಿಳಿಸಿದ್ದಾರೆ. ಇಬ್ಬರ ತಂದೆಯರೂ ರೈತಾಪಿ ವರ್ಗದವರು.
ಬಾಲಕಿಯ ಮದುವೆ; ಜೈಲು: ಎರಡು ಮದುವೆಯಾಗಿ ವಿಚ್ಛೇದನ ಪಡೆದ 40 ವರ್ಷದ ವ್ಯಕ್ತಿಯೊಬ್ಬ, ಕೆಲವು ದಿನಗಳ ಹಿಂದಷ್ಟೇ ಚಿತ್ರದುರ್ಗದಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿದ್ದ. ಈ ಪ್ರಕರಣದ ಬೆನ್ನುಹತ್ತಿದ ಸಾಂತ್ವನ ಕೇಂದ್ರದವರು ಆತನಿಗೆ ಜೈಲು ಶಿಕ್ಷೆಯಾಗುವಂತೆ ಮಾಡಿದ್ದಾರೆ. ವಾರಕ್ಕೆ 4–5 ಬಾಲಕಿಯರ ನಾಪತ್ತೆ ಪ್ರಕರಣ ಪ್ರತಿ ಜಿಲ್ಲೆಗಳಲ್ಲೂ ನಡೆಯುತ್ತಿದೆ ಎಂದು ಸಾಂತ್ವನ ಕೇಂದ್ರದವರು ಬೇಸರ ವ್ಯಕ್ತಪಡಿಸಿದರು.
ಜಾಗೃತಿ ಕಾರ್ಯಕ್ರಮ
ಈ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಬಾಲಕಿಯರು ನಾಪತ್ತೆಯಾಗದಂತೆ ಹಾಗೂ ಕೆಲವು ವಿದ್ಯಾರ್ಥಿನಿಯರು ಪ್ರೀತಿ– ಪ್ರೇಮದ ಬಲೆಗೆ ಸಿಲುಕಿ ಮೋಸಕ್ಕೆ ಒಳಗಾಗದಂತೆ ತಡೆಯಲು ಜಿಲ್ಲೆಯ ಎಲ್ಲ ಶಾಲಾ – ಕಾಲೇಜುಗಳಲ್ಲೂ ವಿದ್ಯಾರ್ಥಿನಿಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ. ಪೋಷಕರು ಕೂಡ ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ.
– ಪಾಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.