ಲಖನೌ (ಪಿಟಿಐ): ಬದಾಯೂಂ ಜಿಲ್ಲೆಯಲ್ಲಿ ಸೋದರ ಸಂಬಂಧಿ ದಲಿತ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವುದರಿಂದ ಒತ್ತಡಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಪ್ರಕರಣವನ್ನುಸಿಬಿಐ ತನಿಖೆಗೆ ಒಪ್ಪಿಸಿದೆ.
ಸಿಬಿಐಗೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರದ ಹೇಳಿಕೆ ತಿಳಿಸಿದೆ. ‘ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಸಂತ್ರಸ್ತ ಕುಟುಂಬಗಳ ಒತ್ತಾಯಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸ್ಪಂದಿಸಿದ್ದಾರೆ.
ಆರೋಪಿಗಳ ಬಂಧನ: ತಲೆತಪ್ಪಿಸಿಕೊಂಡಿದ್ದ ಮೂವರು ಸಹೋದರರಾದ ಉರ್ವೇಶ್ ಯಾದವ್, ಸೇವೆಯಿಂದ ವಜಾಗೊಂಡಿರುವ ಕಾನ್ಸ್ಟೆಬಲ್ ಛತ್ರಪಾಲ್ ಯಾದವ್ ಮತ್ತು ಪಪ್ಪು ಯಾದವ್ ಅವರನ್ನು ಬಂಧಿಸಲಾಗಿದೆ. ಇತರ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಟರಾ ಸಾದತ್ಗಂಜ್ ಪೊಲೀಸ್ ಹೊರಠಾಣೆಯ ಮುಖ್ಯಸ್ಥ ರಾಂ ವಿಲಾಸ್ಯಾದವ್ ಅವರನ್ನು ಅಮಾನತು ಮಾಡಲಾಗಿದೆ.