ನವದೆಹಲಿ/ಬದಾಯೂಂ (ಪಿಟಿಐ): ಉತ್ತರ ಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ ನಡೆದ ಇಬ್ಬರು ಸೋದರಿಯರ (ಸೋದರ ಸಂಬಂಧಿಗಳು) ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದ್ದು, ಅವರ ಮೇಲೆ ಅತ್ಯಾಚಾರ ನಡೆದಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
‘ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಸುಮಾರು 40 ವೈಜ್ಞಾನಿಕ ವರದಿಗಳನ್ನು ಸಿಬಿಐ ವಿಶ್ಲೇಷಿಸಿದ್ದು, ಎಫ್ಐಆರ್ನಲ್ಲಿ ಆರೋಪಿಸಿರುವಂತೆ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಅವರ ಹತ್ಯೆ ನಡೆದಿಲ್ಲ’ ಎಂದು ಸಿಬಿಐ ವಕ್ತಾರ ಕಾಂಚನ್ ಪ್ರಸಾದ್ ಗುರುವಾರ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಿ ಪ್ರಕರಣವನ್ನು ಪರಿಸಮಾಪ್ತಿಗೊಳಿಸಲು ಸಿಬಿಐ ಕೋರಲಿದೆ. ಜೊತೆಗೆ ಈ ಪ್ರಕರಣ ಬಗ್ಗೆ ಸೂಕ್ತ ತನಿಖೆ ನಡೆಸದ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಶಿಫಾರಸು ಕೂಡ ಮಾಡಲಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ಬಾಲಕಿಯರ ಕುಟುಂಬದ ಮೂವರು ಮತ್ತು ಸಂಬಂಧಿಯಾದ ನಜ್ರೂ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಬಗ್ಗೆ ಸಿಬಿಐ ಉಲ್ಲೇಖಿಸಿದೆ. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವ ಐವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸದಿರಲು ಸಿಬಿಐ ನಿರ್ಧರಿಸಿದೆ.
ಸಾವನ್ನಪ್ಪಿದ ಸೋದರಿಯರ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದು ಖಚಿತವಾಗಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಮಾಧಿಯಿಂದ ಹೊರತೆಗೆದ ಬಾಲಕಿಯರ ಶವಗಳನ್ನು ಪರೀಕ್ಷೆ ನಡೆಸಿದ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ, ಡಿಎನ್ಎ ಬೆರಳಚ್ಚು ಮಾದರಿ ಮತ್ತು ವಿಶ್ಲೇಷಣಾ ಕೇಂದ್ರ, ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದವರನ್ನು ಒಳಗೊಂಡ ವೈದ್ಯಕೀಯ ಮಂಡಳಿಯ ವರದಿ ತಿಳಿಸಿದೆ.
ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯ |
ಬಾಲಕಿಯರ ವಸ್ತ್ರಗಳ ಮೇಲೆ ಪುರುಷರ ಡಿಎನ್ಎ ಮಾದರಿಯ ಯಾವ ಕಲೆಯೂ ಇಲ್ಲ. ಬಂಧಿಸಲಾಗಿರುವ ಪ್ರಮುಖ ಆರೋಪಿಗಳ ಬಟ್ಟೆಗಳ ಮೇಲೆ ಬಾಲಕಿಯರ ಡಿಎನ್ಎ ಮಾದರಿಯ ಕಲೆ ಕೂಡ ಪತ್ತೆಯಾಗಿಲ್ಲ. ಬಾಲಕಿಯರ ಕುತ್ತಿಗೆಯಲ್ಲಿನ ಕುಣಿಕೆಯ ಗುರುತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ಸ್ಪಷ್ಟಗೊಳಿಸುತ್ತದೆಂದು ಮಂಡಳಿ ಅಭಿಪ್ರಾಯಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೇ 27ರಂದು ಕಾಣೆಯಾಗಿದ್ದಾರೆ ಎನ್ನಲಾದ ಸೋದರಿಯರ ಶವಗಳು ಬೃಹತ್ ಮಾವಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮರುದಿನ ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋದರರಾದ ಪಪ್ಪು, ಅವದೇಶ್ ಮತ್ತು ಉರ್ವೇಶ್ ಯಾದವ್ ಅವರನ್ನು ಬಂಧಿಸಲಾಗಿದೆ. ಕಾನ್ಸ್ಟೆಬಲ್ಗಳಾದ ಛತ್ರಪಾಲ್ ಯಾದವ್, ಸರ್ವೇಶ್ ಯಾದವ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಗಂಗಾ ನದಿ ದಡದಲ್ಲಿ ಬಾಲಕಿಯರ ಶವಗಳನ್ನು ಮಣ್ಣು ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ಮೇಲೆ ಶವಗಳನ್ನು ಹೊರತೆಗೆಯುವ ಪ್ರಯತ್ನಕ್ಕೆ ಗಂಗಾ ನದಿಯಲ್ಲಿ ಉಂಟಾದ ಪ್ರವಾಹ ಅಡ್ಡಿಯುಂಟು ಮಾಡಿತ್ತು. ಹಿರಿಯ ಸೋದರಿ ಸ್ಥಳೀಯ ಯುವಕನೊಂದಿಗೆ ಪ್ರೇಮ ವ್ಯವಹಾರ ಹೊಂದಿದ್ದಳು. ಇವರ ಭೇಟಿ ಸಂದರ್ಭದಲ್ಲಿ ಕಿರಿಯ ಸೋದರಿ ಸುತ್ತಲಿನ ನಿಗಾ ವಹಿಸುತ್ತಿದ್ದಳು. ಇದು ಬಹಿರಂಗಗೊಂಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.