ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ನಿವೃತ್ತಿಯೇ ಇಲ್ಲ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಕೆಲಸದ ಬಗ್ಗೆ, ನಿವೃತ್ತಿ ಬಗ್ಗೆ ಜನ ತಪ್ಪಾದ ಅಭಿಪ್ರಾಯ ಹೊಂದಿದ್ದಾರೆ. ನಾನು ಕಡಿಮೆ ಕೆಲಸ ಮಾಡಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ವರ್ಷ ಕಳೆದಂತೆ ಅದು ನಂಬಿಕೆಯಾಗಿ ಬದಲಾಗುತ್ತದೆ.

ಇದೇ ಕಾರಣಕ್ಕೆ ನಾವು ಸಣ್ಣ ವಯಸ್ಸಿನಲ್ಲೇ ಮುದುಕರಾದಂತೆ ಕಾಣುತ್ತೇವೆ. ಅನಗತ್ಯ ಸಿಟ್ಟು ನಮ್ಮೊಳಗೆ ಬೆಳೆಯುತ್ತ ಹೋಗುತ್ತದೆ. ಮುಂದೊಂದು ದಿನ ಕೆಲಸ ಕಡಿಮೆಯಾಗುತ್ತದೆ ಎಂದು ನೀವು ಭಾವಿಸಿದ್ದಲ್ಲಿ ಅದು ತಪ್ಪು. ಸಿಟ್ಟು, ಹಳಹಳಿಕೆ ಮತ್ತು ಭಯದ ಗಂಟು ನಿಮ್ಮ ಮನದೊಳಗೆ ನಿಂತುಹೋಗುತ್ತದೆ.

ನಿವೃತ್ತಿ ಹೊಂದಿದವರು ಹತ್ತಾರು ದಾಖಲೆಗಳನ್ನು ಸಂಗ್ರಹಿಸಬೇಕಾಗುತ್ತದೆ. ಹೆಚ್ಚುತ್ತಿರುವ ವೆಚ್ಚದಿಂದಾಗಿ ಹೂಡಿಕೆ ಮಾಡಲು ಯೋಜಿಸಬೇಕಾಗುತ್ತದೆ. ಇದು ಅವರಲ್ಲಿ ಹತಾಶೆ, ಅಸಹಾಯಕತೆ ಹುಟ್ಟುಹಾಕುತ್ತದೆ.

ಕೆಲವೊಮ್ಮೆ ನಿಮ್ಮ ತಟ್ಟೆಗಳನ್ನು ನೀವೇ ತೊಳೆದುಕೊಳ್ಳಬೇಕಾಗುತ್ತದೆ. ಕಸ ಎಸೆಯಬೇಕಾಗುತ್ತದೆ. ಅಡುಗೆ ಮಾಡಬೇಕಾಗುತ್ತದೆ, ನೀವೇ ಡ್ರೈವ್ ಮಾಡಬೇಕಾಗುತ್ತದೆ.ನಿಮ್ಮ ಐಷಾರಾಮಿ ಜೀವನಶೈಲಿಗೆ ಕಡಿತ ಹಾಕಬೇಕಾಗುತ್ತದೆ. ನಿಮ್ಮ ಆದಾಯ ಕಡಿಮೆಯಾಗಬಹುದು ಅಥವಾ ಕಡಿಮೆಯಾಗದೆಯೂ ಇರಬಹುದು.

ನಮ್ಮ ವಿದ್ಯಾರ್ಥಿ ವೇದಿಕಾ ಹೇಳಿದಂತೆ ನಿಮ್ಮ ಜೇಬಿನಲ್ಲಿ 2000 ರೂಪಾಯಿ ಇರಬಹುದು. ಆದರೂ ನಿಮ್ಮ ಬಳಿ 20 ರೂಪಾಯಿ ಮಾತ್ರ ಇದ್ದಂತೆ ಭಾಸವಾಗಬಹುದು.ನಿಮ್ಮ ಜೇಬಿನಲ್ಲಿ ಕೇವಲ 20 ರೂಪಾಯಿ ಇದ್ದಾಗಲೂ ನನ್ನ ಬಳಿ 2000 ರೂಪಾಯಿ ಇದೆ ಎಂದು ನಿಮಗೆ  ಅನಿಸಬಹುದು.

ನಿವೃತ್ತಿಯ ನಂತರ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಜೀವನ ಮತ್ತಷ್ಟು ಸಕ್ರಿಯವಾಗುತ್ತದೆ. ಬದುಕು ಮತ್ತೊಂದು ದಿಕ್ಕಿನತ್ತ ಹರಿಯುತ್ತದೆ. ಒಂದು ವ್ಯವಸ್ಥೆಯಿಂದ ಮತ್ತೊಂದು ವ್ಯವಸ್ಥೆಯತ್ತ ಮಗ್ಗಲು ಬದಲಿಸುವಾಗ ಒಂದು ರೀತಿಯ ಒತ್ತಡ ಉಂಟಾಗುತ್ತದೆ. ಗೊಂದಲ ಕಾಡುತ್ತದೆ. ಇವೆಲ್ಲ ತಾತ್ಕಾಲಿಕ ಅಷ್ಟೇ. ಹೊಸ ಪ್ರವೃತ್ತಿಯನ್ನು ನೀವು ಸಂರ್ಪೂಣವಾಗಿ ಅಪ್ಪಿಕೊಂಡು ತಿಳಿದುಕೊಳ್ಳುವವರೆಗೆ ಈ ಗೊಂದಲವೆಲ್ಲ ಇರುತ್ತದೆ.

ಬದುಕುವುದು ಸುಲಭವಲ್ಲ. ಆದರೆ, ಅದೊಂದು ಉದ್ಯೋಗವೂ ಅಲ್ಲ. ಬದುಕನ್ನು ಒಂದು ಕೆಲಸ ಎಂದು  ಅಂದುಕೊಂಡಾಗ  ನಾವು ಅದರ ಲಯವನ್ನೇ ಕಳೆದುಕೊಂಡುಬಿಡುತ್ತೇವೆ.

ಆದರೆ, ಬದುಕನ್ನು ಸುಂದರವಾಗಿಸಲು ಮತ್ತಷ್ಟು ಕೆಲಸ ಮಾಡಿದಾಗ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿ ಮುಂದುವರಿಯಲು ಹೆಜ್ಜೆ ಇಡುತ್ತೇವೆ. ನಿತ್ಯದ ಬದುಕಿನ ಸಂವಹನದಲ್ಲಿ ಎದುರಾಗುವ ವಿಚಾರಗಳು, ಪೂರ್ವಗ್ರಹಗಳು, ಸಂಶಯ, ಅನುಮಾನಗಳೆಲ್ಲ ಕರಗಿ ಮನಸ್ಸು ನಿರಾಳವಾಗುತ್ತದೆ. ತನ್ನದೇ ಆದ ಏಕಾಂತವನ್ನು, ವೈಶಾಲ್ಯವನ್ನು ಮನಸ್ಸು ಸೃಷ್ಟಿಸಿಕೊಳ್ಳುತ್ತದೆ.

ಈ ವೈಶಾಲ್ಯ ಎಲ್ಲವನ್ನೂ ಗುಣಪಡಿಸುವಂತಹದ್ದು. ನನಗೆ ಬೇಸರವಾಗುತ್ತಿದೆ ಎಂಬಂತಹ ವಿಚಾರಗಳಿಂದ ಮನಸ್ಸನ್ನು ಸಂಕುಚಿತಗೊಳಿಸಿಕೊಳ್ಳದೇ ಹೋದಲ್ಲಿ ನಮ್ಮದೇ ಕಾಂತಿಯಿಂದ ನಾವು ಬೆಳಗುತ್ತೇವೆ.

ನೃತ್ಯಗಾತಿಯೊಬ್ಬಳು ಒಮ್ಮೆ ನನಗೆ ಹೇಳಿದಂತೆ, ‘ಬದುಕು ಎಂದರೆ ನೃತ್ಯ. ಅದನ್ನು ಮತ್ತಷ್ಟು ಆಕರ್ಷಕವಾಗಿಸಲು, ಅದರಲ್ಲಿ ಲಾಲಿತ್ಯ ತುಂಬಲು ನೀವು ಒಂದು ಕ್ಷಣ ನಿಂತುಕೊಳ್ಳುತ್ತೀರಿ ಅಷ್ಟೇ. ನನಗೆ ಏನೂ ಸಾಧಿಸಲು ಸಾಧ್ಯವಾಗಿಲ್ಲ. ನಾನೇನೂ ಮಾಡುತ್ತಿಲ್ಲ. ಎಂಬಂತಹ ಭಾವವನ್ನು ತ್ಯಜಿಸಿ’ ಸರಳವಾಗಿ ಬದುಕಿ, ಲಾಲಿತ್ಯ, ಘನತೆಯಿಂದ ಬದುಕಿ. ನೀವು ಈ ನಿರ್ಧಾರ ತೆಗೆದುಕೊಂಡಾಗ ಎಲ್ಲವೂ ಸುಲಲಿತವಾಗಿ ಸಾಗುತ್ತದೆ. ಯಾವುದೇ ಕ್ಷಣವೂ ವ್ಯರ್ಥ ಎನಿಸುವುದಿಲ್ಲ.

ನಿಮ್ಮತನಕ್ಕೆ ಹೊಂದದ ಎಲ್ಲವನ್ನೂ ಬಿಟ್ಟುಬಿಡುತ್ತೀರಿ.   ಬದುಕಿನ ಓಟದಲ್ಲಿ ಅನಗತ್ಯ ಸ್ಪರ್ಧೆಯನ್ನು, ಒರಟುತನವನ್ನು ಬಿಟ್ಟುಬಿಡುತ್ತೀರಿ. ನಿವೃತ್ತಿ ನಂತರದ ಪಿಂಚಣಿ ಯೋಜನೆ, ಉಳಿತಾಯ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮತ್ಯಾರದೋ ಆಣತಿಯಂತೆ ಬದುಕುವುದನ್ನು ಬಿಟ್ಟು, ನಿಮ್ಮ ಬದುಕಿನ ಲಯವನ್ನು ನೀವೇ ನಿರ್ಧರಿಸಿಕೊಳ್ಳುತ್ತೀರಿ.

ಹಾಗೆಂದು ನೀವು ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಆದರೆ, ಹುಚ್ಚು ಸ್ಪರ್ಧೆಯನ್ನು ನಿಲ್ಲಿಸಿದ್ದೀರಿ. ಇಂತಹ ಮನೋಭಾವ ಹೊಂದಿದಾಗ ಒಂದು ದೈವಿಕ ಶಕ್ತಿ ನಿಮ್ಮನ್ನು ಆವರಿಸುತ್ತದೆ. ನಿಮ್ಮ ಆತ್ಮಕ್ಕೆ ಅಂಟಿದ ಬಂಧನವೆಲ್ಲ ಕರಗಿ ಹೊಸ ಶಕ್ತಿ ಹುಟ್ಟುತ್ತದೆ. ಈ ಹೊಸ ಸ್ವಾತಂತ್ರ್ಯದಲ್ಲಿ ಬದುಕುವ ಹೊಸ ವಿಧಾನ ಕಂಡುಕೊಳ್ಳಿ.

ದೈಹಿಕ, ಮಾನಸಿಕ ಜಂಜಾಟಗಳನ್ನು ತೊಡೆದುಹಾಕಿದಾಗ ನಿಮ್ಮ ಬದುಕು ಮತ್ತಷ್ಟು ವಿಶಾಲವಾಗುತ್ತದೆ. ಲಾಭ ಅಥವಾ ಸ್ಪರ್ಧೆಯ ಬಗ್ಗೆ ಯೋಚಿಸದೇ ಕರುಣೆಯಿಂದ ವರ್ತಿಸಿ.

ಸ್ಪರ್ಧೆಗೆ ಬಿದ್ದಾಗ ನಿಮ್ಮ ಸಹೋದ್ಯೋಗಿಗಳೆಲ್ಲ  ವೈರಿಗಳಂತೆ ಕಾಣುತ್ತಾರೆ. ಲಾಭದ ಕಡೆ ತುಡಿತವಿದ್ದಾಗ ನೀವು ಸಂಪನ್ಮೂಲದ ಕಡೆ ಮಾತ್ರ ನೋಡುತ್ತೀರಿ. ವ್ಯಕ್ತಿಯನ್ನಲ್ಲ.

ಆದರೆ, ಕರುಣೆ, ಸಹಾನುಭೂತಿ ಇದ್ದಾಗ ಇಡೀ ವಿಶ್ವವೇ ಒಂದು ಎಂಬ ಭಾವ ಆವರಿಸುತ್ತದೆ. ದಲೈಲಾಮ ಅವರನ್ನು ಭೇಟಿಯಾಗಿದ್ದಾಗ ಅವರ ಕಣ್ಣುಗಳಲ್ಲಿ ಇದೇ ಭಾವ ಕಂಡಿತ್ತು.

ದಲೈಲಾಮ ಅವರಂತೆ ದಿನದ ಕೆಲ ಸಮಯವನ್ನು ನಿಮಗಾಗಿ ಮೀಸಲಿಟ್ಟುಕೊಳ್ಳಿ. ದೇಹ ಸ್ವಾಸ್ಥಕ್ಕಾಗಿ ವ್ಯಾಯಾಮ ಮಾಡಿ. ಮನಸ್ಸಿನ ಸ್ವಾಸ್ಥ್ಯಕ್ಕಾಗಿ ಕರುಣೆಯಿಂದ ವರ್ತಿಸಿ. ನಿಮ್ಮೊಳಗೆ ಹಾಗೂ ಹೊರಗೆ ಪೂರ್ಣತ್ವ ಸಾಧಿಸಲು ಧ್ಯಾನ ಮಾಡಿ. ಬದುಕಿನ ಸಿಹಿಯಾದ ಸಂಗೀತ ಆಲಿಸಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT