ಬರಗೂರು ರಾಮಚಂದ್ರಪ್ಪನವರು ‘ಸಾಂಸ್ಕೃತಿಕ ನೀತಿ’ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹಾಗಾದರೆ ಕಳೆದ 50–60 ವರ್ಷಗಳಿಂದ ಕನ್ನಡ ನಾಡಿನಲ್ಲಿ ಯಾವುದೇ ಸಾಂಸ್ಕೃತಿಕ ನೀತಿ ಇರಲಿಲ್ಲವೆ? ಕಲೆ, ಸಾಹಿತ್ಯ, ಸಂಸ್ಕೃತಿ ಕೆಲಸಗಳು ನಡೆದೇ ಇಲ್ಲವೆ? ಬರಗೂರು ಅವರು ನೀಡಿರುವ ಕೆಲವು ಶಿಫಾರಸುಗಳನ್ನು ನೋಡಿ ನಗುಬಂತು! ‘ಸೂಫಿ ಅಧ್ಯಯನ ಕೇಂದ್ರ’, ‘ಬುಡಕಟ್ಟು ವಿಶ್ವವಿದ್ಯಾಲಯ’ ಇವನ್ನೆಲ್ಲಾ ಸ್ಥಾಪಿಸುವಂತೆ ಸರ್ಕಾರಕ್ಕೆ ಈ ವರದಿ ಶಿಫಾರಸು ಮಾಡಿದೆ. ಇದು ಈ ಸಮಿತಿಯ ಕೆಲಸವಲ್ಲ. ವಿಶ್ವವಿದ್ಯಾಲಯಗಳನ್ನು ತೆರೆಯುವ ಅಥವಾ ಬಿಡುವ ಕೆಲಸ ಶಿಕ್ಷಣ ಇಲಾಖೆಗೆ ಸೇರಿದ್ದು.
ಮೊನ್ನೆ ಸದನದಲ್ಲಿ ಶಾಸಕರೊಬ್ಬರು ಟೊಮಾಟೊ, ಆಲೂಗಡ್ಡೆ, ದ್ರಾಕ್ಷಿಗೆ ತಲಾ ಒಂದೊಂದು ವಿ.ವಿ. ತೆಗೆದು ಅವುಗಳಿಗೆ ಎಂ.ಎಲ್.ಎ.ಗಳನ್ನೇ ‘ಕುಲಪತಿ’ಗಳನ್ನಾಗಿ ಮಾಡಿ ಎಂದು ಕೃಷಿ ಸಚಿವರಿಗೆ ವ್ಯಂಗ್ಯವಾಗಿ ಹೇಳಿದ್ದನ್ನು ಸ್ಮರಿಸಬಹುದು. ಹಿಂದಿದ್ದ ಬಿಜೆಪಿ ಸರ್ಕಾರವು ಸಂಸ್ಕೃತ, ಜಾನಪದ, ಸಂಗೀತ ವಿಷಯಗಳಿಗೆ ತಲಾ ಒಂದೊಂದು ವಿ.ವಿ. ತೆಗೆಯಿತು.
ಈಗ ಅವುಗಳೆಲ್ಲಾ ‘ಅಣಬೆ’ಗಳಂತಾಗಿ ಅಲ್ಲಿರುವ ಕುಲಪತಿ–ರಿಜಿಸ್ಟ್ರಾರ್ಗಳೇ ಕಿತ್ತಾಡಿ ಬೀದಿರಂಪಗಳಾಗಿವೆ. ಹೀಗಿರುವಾಗ ರಾಮಚಂದ್ರಪ್ಪನವರು ಈ ಬುಡಕಟ್ಟು, ಅಲೆಮಾರಿ, ಸೂಫಿ–ಅಧ್ಯಯನ ಕೇಂದ್ರ, ವಿಶ್ವವಿದ್ಯಾಲಯಗಳನ್ನು ತೆರೆಯಲು ಶಿಫಾರಸು ಮಾಡಿ ಕನ್ನಡ ಸಂಸ್ಕೃತಿ ಸಚಿವೆಗೆ ವರದಿ ಕೊಟ್ಟಿದ್ದಾರೆ. ಸಚಿವೆ ಇವುಗಳನ್ನು ಕೂಡಲೇ ಅನುಷ್ಠಾನ ಮಾಡ್ತೀವಿ ಅಂದಿದ್ದಾರೆ. ಇದೆಲ್ಲಾ ಎಷ್ಟು ಸೂಕ್ತ?