1974ರಲ್ಲಿ ‘ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ’ ಆರಂಭವಾದಾಗ ಯು.ಆರ್. ಅನಂತಮೂರ್ತಿ ಅವರನ್ನು ಅದರ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು ಎಂದು ನಾನು ಹೇಳಿದ್ದೆ. ಆದರೆ, ಬ್ರಾಹ್ಮಣ ಅನಂತಮೂರ್ತಿ ಅವರನ್ನು ಒಕ್ಕೂಟದ ಸದಸ್ಯರನ್ನಾಗಿ ಮಾಡಿಕೊಳ್ಳಬಾರದು ಎಂದು ಆಗ ವಿರೋಧ ವ್ಯಕ್ತವಾಯಿತು. ಪಿ. ಲಂಕೇಶ್ ಅವರು ಆಗ ಒಕ್ಕೂಟದ ಅಧ್ಯಕ್ಷರಾಗಿದ್ದರು. ನಾನು ಸಂಚಾಲಕ ಆಗಿದ್ದೆ.
ಆದರೆ ಇದಾದ ನಾಲ್ಕು ವರ್ಷಗಳ ನಂತರ ಶಿವಮೊಗ್ಗದಲ್ಲಿ ನಡೆದ ಒಕ್ಕೂಟದ ಸಮಾವೇಶದಲ್ಲಿ, ನಮ್ಮ ಚಿಂತನೆಗೆ ಸರಿಹೊಂದುವ ಬ್ರಾಹ್ಮಣರಿಗೂ ಒಕ್ಕೂಟದ ಸದಸ್ಯತ್ವ ಕೊಡಬಹುದು ಎಂದು ತೀರ್ಮಾನಿಸಲಾಯಿತು. ಆಗ ಜಿ.ಎಸ್. ಶಿವರುದ್ರಪ್ಪ ಅವರು ಒಕ್ಕೂಟದ ಅಧ್ಯಕ್ಷರು. ಒಕ್ಕೂಟ ಆರಂಭವಾದಾಗ ಅನಂತಮೂರ್ತಿ ಅವರಿಗೆ ಸದಸ್ಯತ್ವ ನೀಡದಿದ್ದದ್ದು ನಿಜಕ್ಕೂ ತಪ್ಪು.
ಒಕ್ಕೂಟದ ಕಾರ್ಯಕ್ರಮಗಳಿಗೆ ಬಂದು ಅನಂತಮೂರ್ತಿ ಅಲ್ಲಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಅವರು ಮೈಸೂರಿನಲ್ಲಿ ನಡೆದ ಜಾತಿ ವಿನಾಶ ಸಮಾವೇಶಕ್ಕೂ ಬಂದು ಮಾತುಗಳನ್ನು ಕೇಳಿಸಿಕೊಂಡಿದ್ದರು. ಒಕ್ಕೂಟದ ಬಗ್ಗೆ ಅನಂತಮೂರ್ತಿ ಅವರಿಗೆ ಸಿನಿಕ ಮನೋಭಾವ ಖಂಡಿತ ಇರಲಿಲ್ಲ. ಒಕ್ಕೂಟವು ಬ್ರಾಹ್ಮಣ ವಿರೋಧಿ ಎಂದು ಅವರು ಭಾವಿಸಲಿಲ್ಲ. ಒಕ್ಕೂಟದ ಹುಟ್ಟು, ಅದರ ಚಟುವಟಿಕೆಗಳನ್ನು ಪ್ರಜಾಸತ್ತಾತ್ಮಕ ದೃಷ್ಟಿಯಿಂದ ನೋಡುತ್ತಿದ್ದರು. ಇದು ಅವರ ದೊಡ್ಡ ಗುಣ ಅದು.
ಬರಹಗಾರರ ಒಕ್ಕೂಟದಿಂದಾಗಿ ಸಣ್ಣ ಸಮುದಾಯಗಳ, ಅಬ್ರಾಹ್ಮಣ ಸಮುದಾಯಗಳ ದೊಡ್ಡ ಸಂಖ್ಯೆಯ ಬರಹಗಾರರು ಮುಂದೆ ಬರಲು ಸಾಧ್ಯ ಎಂದು ಪ್ರತಿಕ್ರಿಯಿಸಿದ್ದರು. ಟ್ಯಾಗೋರ್ ನಂತರ ಸಾಂಸ್ಕೃತಿಕವಾಗಿ ಯೋಚಿಸಿದ ಬಹುದೊಡ್ಡ ಬರಹಗಾರ ಅವರು.