ನವದೆಹಲಿ (ಪಿಟಿಐ): ಆಗ್ರಾ ಮತ್ತು ಕೆಲ ಪ್ರದೇಶಗಳಲ್ಲಿ ಮಾಡಲಾಗಿದೆ ಎನ್ನಲಾದ ಬಲವಂತದ ಮತಾಂತರ ಕುರಿತು ಬುಧವಾರ (ಡಿ. 17) ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ವಿರೋಧಪಕ್ಷಗಳು ಶುಕ್ರವಾರವೂ ರಾಜ್ಯಸಭೆಯಲ್ಲಿ ಮತಾಂತರ ವಿಚಾರ ಎತ್ತಿದವು. ಅಲೀಗಡದಲ್ಲಿ ಕ್ರೈಸ್ತರನ್ನು ಮತಾಂತರಗೊಳಿಸುವ ಬೆದರಿಕೆ ಹಾಕಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದವು. ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಸರ್ಕಾರ ಈ ವಿಚಾರದ ಕುರಿತು ಡಿ.17ರಂದು ಚರ್ಚಿಸಲಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಜೆಡಿಯುನ ಕೆ.ಸಿ.ತ್ಯಾಗಿ, ಮಸೀದಿಗಳಿಂದ ಮೈಕ್ ಕಿತ್ತುಹಾಕಲು ವಿಶ್ವ ಹಿಂದೂ ಪರಿಷತ್ ಗೊತ್ತುವಳಿ ಮಂಡಿಸಿರುವ ವಿಷಯವನ್ನು ಸದನದ ಗಮನಕ್ಕೆ ತಂದರು. ಉಪ ಸಭಾಧ್ಯಕ್ಷ ಪಿ.ಜೆ. ಕುರಿಯನ್ ಈ ಎರಡೂ ವಿಚಾರಕ್ಕೂ ಸಂಬಂಧ ಕಲ್ಪಿಸಬಾರದು ಎಂದು ತಿಳಿಸಿದರು.
ಎಚ್ಚರಿಕೆ (ಅಲೀಗಡ ವರದಿ): ಡಿ. 25ರಂದು ಸಾಮೂಹಿಕ ಮತಾಂತರ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿಂದೂ ಸಂಘಟನೆಗಳಿಗೆ ಅಲೀಗಡ ಜಿಲ್ಲಾ ಆಡಳಿತ ಎಚ್ಚರಿಕೆ ನೀಡಿದೆ. ಧಾರ್ಮಿಕ ಮತಾಂತರ ವ್ಯಕ್ತಿಗಳ ವೈಯಕ್ತಿಕ ಆಯ್ಕೆಯಾಗಿದ್ದು, ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಈ ನಿಯಮವನ್ನು ದುರ್ಬಳಕೆ ಮಾಡಿಕೊಂಡು ಯಾರಾದರೂ ಕೋಮು ಸೌಹಾರ್ದ ಕದಡಲು ಯತ್ನಿಸಿದಲ್ಲಿ ಅದನ್ನು ನಾವು ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ಅವರು ಎಚ್ಚರಿಸಿದ್ದಾರೆ.