ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಣ ‘ಗುದ್ದಾಟ’ಕ್ಕೆ ಕೊನೆಯೇ ಇದ್ದಂತಿಲ್ಲ. ಕಬ್ಬಿಗೆ ದರ ನಿಗದಿಯಿಂದ ಬಾಕಿ ಹಣ ಪಡೆಯುವವರೆಗೂ ಬೆಳೆಗಾರರು ಯಾವುದೋ ಒಂದು ಬಗೆಯಲ್ಲಿ ಒತ್ತಡ ಹೇರಲೇಬೇಕಾದ ಅನಿವಾರ್ಯ ಸ್ಥಿತಿ ಒದಗಿರುವುದು ಕಾರ್ಖಾನೆಗಳು ಹಾಗೂ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಅಲ್ಲದೇ ರೈತರು ಮತ್ತು ಕಾರ್ಖಾನೆಗಳ ನಡುವೆ ಉಳಿದಿರುವ ಚೂರುಪಾರು ಸೌಹಾರ್ದ ಸಂಬಂಧಕ್ಕೂ ಇದು ಧಕ್ಕೆ ತರಲಿದೆ.
ಕಬ್ಬು ಅರೆಯುವ ಹಂಗಾಮು ಇನ್ನೇನು ಶುರುವಾಗಲಿದೆ ಎನ್ನುವ ಹೊತ್ತಿಗೆ ‘ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕು’ ಎಂದು ಒತ್ತಾಯಿಸಿ ರೈತರು ಚಳವಳಿ ಮಾರ್ಗ ಹಿಡಿಯುವುದು ಈಚೆಗೆ ಮಾಮೂಲಿಯೆನಿಸಿದೆ. ಕಳೆದ ನವೆಂಬರ್ನಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವಾಗಲೇ ಬೆಲೆ ನಿಗದಿಗೆ ಒತ್ತಾಯಿಸಿ ನಡೆದ ಧರಣಿ ವೇಳೆ ಹತಾಶಗೊಂಡ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ಧರಣಿ, ಪ್ರತಿಭಟನೆಗಳ ಬಿಸಿ ತಟ್ಟುತ್ತಲೇ ರಾಜ್ಯ ಸರ್ಕಾರ ನಿದ್ದೆಯಿಂದ ಎದ್ದು ಕಬ್ಬಿಗೆ ಬೆಲೆ ನಿಗದಿ ಮಾಡುತ್ತದೆಯಾದರೂ ಎಷ್ಟೋ ಕಾರ್ಖಾನೆಗಳು ಆ ದರ ಕೂಡ ನೀಡುವುದಿಲ್ಲ. ಅಂತಹ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಬಹುಪಾಲು ಕಾರ್ಖಾನೆಗಳು ರಾಜಕಾರಣಿಗಳ ಹಿಡಿತದಲ್ಲೇ ಇರುವುದು ಇದಕ್ಕೊಂದು ಕಾರಣ ಇರಬಹುದು. ಇದಕ್ಕೆ ಪಕ್ಷಭೇದ ಕೂಡ ಇಲ್ಲ. ಈ ಲಾಬಿ ಪ್ರಭಾವಕ್ಕೆ ಮಣಿಯುತ್ತಲೇ ಬಂದಿರುವ ಸರ್ಕಾರ ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿವಾರಣೋಪಾಯಗಳ ಕುರಿತು ಗಂಭೀರವಾಗಿ ಚಿಂತಿಸಬೇಕು.
ಕಾರ್ಖಾನೆಗಳಿಂದ ಬರಬೇಕಿರುವ ಬಾಕಿ ಹಣ ಪಾವತಿಗೆ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳು ಈಗ ಬೀದಿಗೆ ಇಳಿದಿವೆ. ರೈತರ ಕೂಗು ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ₨ 2,100 ದರ ನಿಗದಿಪಡಿಸಿದೆ. ಆ ದರ ನೀಡದ ಕಾರ್ಖಾನೆಗಳಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ ಎಂದು ಸಕ್ಕರೆ ಸಚಿವರು ತಿಳಿಸಿದ್ದಾರೆ. ಆ ಪೈಕಿ ಕೆಲವು ಕಾರ್ಖಾನೆಗಳು ನೋಟಿಸ್ಗೂ ಉತ್ತರ ನೀಡದಿರುವುದು ಉದ್ಧಟತನವಲ್ಲದೆ ಬೇರೇನೂ ಅಲ್ಲ.
ಕಾರ್ಖಾನೆಗಳಿಂದ ರೈತರಿಗೆ ₨ 503 ಕೋಟಿ ಬಾಕಿ ಪಾವತಿಯಾಗಬೇಕಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಆದರೆ ರೈತ ಸಂಘದ ಪ್ರಕಾರ ಬೆಳೆಗಾರರಿಗೆ ಬರಬೇಕಿರುವ ಬಾಕಿ ಮೊತ್ತ ₨ 3,500 ಕೋಟಿ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರದಲ್ಲಿ ವ್ಯತ್ಯಾಸ ಇರುವುದರಿಂದ ಬಾಕಿ ಮೊತ್ತದ ಲೆಕ್ಕಾಚಾರದಲ್ಲಿಯೂ ವ್ಯತ್ಯಾಸವಿರಲು ಸಾಧ್ಯ. ಆದರೆ ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆಗಳು ಪ್ರತೀ ವರ್ಷ ರೈತರನ್ನು ಸತಾಯಿಸುವುದು ಅಕ್ಷಮ್ಯ. ಸಕ್ಕರೆ ಅಲ್ಲದೆ, ಕಾಕಂಬಿ ಮತ್ತಿತರ ಉಪ ಉತ್ಪನ್ನಗಳಿಂದಲೂ ಆದಾಯ ಬರುವುದರಿಂದ ಕಾರ್ಖಾನೆಗಳು ಉದಾರ ನಿಲುವು ತಾಳಬೇಕು.
ಬೆಲೆ ನಿಗದಿ ಮಾಡುವಾಗ ಸರ್ಕಾರ ಇದನ್ನೆಲ್ಲ ಗಣನೆಗೆ ತೆಗೆದುಕೊಳ್ಳಬೇಕು. ಬಾಕಿ ಪಾವತಿಯಲ್ಲಿ ವಿಳಂಬ ಧೋರಣೆ ಅನುಸರಿಸದಂತೆ ಕಾರ್ಖಾನೆಗಳ ಕಿವಿ ಹಿಂಡಬೇಕು. ಬಾಕಿ ಪಾವತಿಸಲು ಅನುಕೂಲ ಆಗುವಂತೆ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ₨ 4,400 ಕೋಟಿ ಬಡ್ಡಿರಹಿತ ಸಾಲ ನೀಡಲು ಮುಂದಾಗಿದೆ. ಇದರ ಪ್ರಯೋಜನ ಪಡೆದು ರೈತರ ಬಾಕಿ ಚುಕ್ತಾ ಮಾಡಬೇಕು. ರಾಜ್ಯ ಸರ್ಕಾರ ಕೂಡ ₨ 189 ಕೋಟಿ ನೀಡಬೇಕಾಗಿದೆ. ಈ ಪ್ರೋತ್ಸಾಹ ಧನವನ್ನಾದರೂ ತಕ್ಷಣ ಬಿಡುಗಡೆ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.