ನಾನು, ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ಯೊಂದಕ್ಕೆ ಮಾರ್ಚ್ ತಿಂಗಳಲ್ಲಿ 130 ಟನ್ಗಳಷ್ಟು ಕಬ್ಬು ಕಳಿಸಿದ್ದೇನೆ. ಕಾನೂನಿನ ಪ್ರಕಾರ ಕಬ್ಬು ಪೂರೈಸಿದ 14 ದಿನಗಳಲ್ಲಿ ಬಿಲ್ಲು ಪಾವತಿಸಬೇಕೆಂಬ ನಿಯಮವಿದ್ದರೂ ಇದುವರೆಗೆ ಬಿಲ್ ಪಾವತಿಯಾಗಿಲ್ಲ. ಇದರಿಂದಾಗಿ ಜೀವನ ನಿರ್ವಹಣೆಯೇ ಕಷ್ಟವಾಗಿದೆ.
ನನ್ನ ಇಬ್ಬರು ತಮ್ಮಂದಿರು ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಅವರ ಕಾಲೇಜು ಫೀಸು ಕಟ್ಟಲು ಮತ್ತು ಹೊಸದಾಗಿ ಭೂಮಿಗೆ ಬೀಜ, ಗೊಬ್ಬರ ಹಾಕಲು ತೊಂದರೆಯಾಗಿದೆ. ಜೊತೆಗೆ ಸಾಲಗಾರರ ಕಾಟ ಅತಿಯಾಗಿದೆ. ನನ್ನ ಹಾಗೆಯೇ ನೂರಾರು ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಆದಕಾರಣ ಸಕ್ಕರೆ ಕಾರ್ಖಾನೆಗಳು, ರೈತರಿಗೆ ಉಳಿಸಿಕೊಂಡಿರುವ ಬಾಕಿ ಬಿಲ್ಲು ಪಾವತಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಆದೇಶ ನೀಡಬೇಕು.