ಲಖನೌ/ನವದೆಹಲಿ (ಪಿಟಿಐ): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದಲಿತರ ಮನೆಗೆ ‘ಹನಿಮೂನ್’ಗೆ ತೆರಳುತ್ತಾರೆ ಎಂಬ ಬಾಬಾ ರಾಮದೇವ್ ಹೇಳಿಕೆ ಈಗ ದೊಡ್ಡ ವಿವಾದ ಸೃಷ್ಟಿಸಿದ್ದು, ರಾಮ್ದೇವ್ ವಿರುದ್ಧ ಲಖನೌ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮಧ್ಯೆ, ವಿವಿಧ ರಾಜಕೀಯ ಪಕ್ಷಗಳು ರಾಮ್ದೇವ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ. ಕೆಲವು ಕಡೆ ರಾಮ್ದೇವ್ ವಿರುದ್ಧ ಪ್ರತಿಭಟನೆಗಳೂ ನಡೆದಿವೆ.
ರಾಮದೇವ್ ಅವರ ಹೇಳಿಕೆ ನಾಚಿಕೆಗೇಡಿನದಾಗಿದ್ದು, ತುಚ್ಛವಾಗಿದೆ ಎಂದು ಕಾಂಗ್ರೆಸ್ ಖಂಡಿಸಿದೆ. ರಾಹುಲ್ ವಿರುದ್ಧದ ಹೇಳಿಕೆಗಾಗಿ ರಾಮದೇವ್ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಬ್ಬರೂ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಹಣಕಾಸು ಸಚಿವ ಪಿ. ಚಿದಂಬರಂ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನ ದಲಿತ ನಾಯಕಿಯರಾದ ಕುಮಾರಿ ಶೆಲ್ಜಾ ಹಾಗೂ ಕೃಷ್ಣಾ ತೀರಥ್ ಸಹ ರಾಮದೇವ್ ಹೇಳಿಕೆಯನ್ನು ಖಂಡಿಸಿದ್ದು, ದಲಿತ ಮಹಿಳೆಯರನ್ನು ಕೇವಲ ‘ವಸ್ತು’ವಾಗಿ ನೋಡುವ ವಿಕ್ಷಿಪ್ತ ಮನಃಸ್ಥಿತಿ ಇದು ಎಂದು ಟೀಕಿಸಿದ್ದಾರೆ. ಈ ನಡುವೆ ಬಿಜೆಪಿಯು ರಾಮದೇವ್ ಅವರನ್ನು ಬೆಂಬಲಿಸಿದ್ದು, ಅವರೊಬ್ಬ ‘ಸಂತ’ರಾಗಿದ್ದು ಅವರ ಹೇಳಿಕೆಯನ್ನು ಅವರು ಮಾತನಾಡಿದ ರೀತಿಯಲ್ಲಿಯೇ ಗ್ರಹಿಸಬೇಕು ಎಂದು ಹೇಳಿದೆ.
‘ಹನಿಮೂನ್’ ಅನ್ನುವುದು ಇಂಗ್ಲಿಷ್ ಪದ. ಅವರು ಆ ಪದವನ್ನು ಬಳಸಿದ್ದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಬಿಜೆಪಿ ವಕ್ತಾರ ಷಹನವಾಜ್ ಹುಸೇನ್ ಹೇಳಿದ್ದಾರೆ.
ರಾಹುಲ್ ಗಾಂಧಿ ದಲಿತರನ್ನು ತಮ್ಮ ಮನೆಗೆ ಏಕೆ ಆಹ್ವಾನಿಸುವುದಿಲ್ಲ ಎಂದು ವಾಯವ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ ಉದಿತ್ ರಾಜ್ ಪ್ರಶ್ನಿಸಿದ್ದಾರೆ.
ಪ್ರತಿಕೃತಿ ದಹಿಸಿ ಪ್ರತಿಭಟನೆ: ರಾಮ್ದೇವ್ ಹೇಳಿಕೆ ಖಂಡಿಸಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಕಾರ್ಯಕರ್ತರು ಮತ್ತು ದಲಿತ ಸಂಘಟನೆಗಳ ಸದಸ್ಯರು ಕೆಲವು ಕಡೆ ಪ್ರತಿಭಟನೆ ನಡೆಸಿದ್ದಾರೆ.
ಪಂಜಾಬ್ನ ಫಗ್ವಾಡಾದಲ್ಲಿ ಕೆಲವು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು, ರಾಮ್ದೇವ್ ಪ್ರತಿಕೃತಿ ದಹಿಸಿದರು.
ಹಿಂಪಡೆಯಲು ಸಿದ್ಧ: ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ, ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಾಮ್ದೇವ್ ಅವರು, ದಲಿತರಿಗೆ ನೋವು ತರುವಂತಿದ್ದರೆ ಹೇಳಿಕೆ ಹಿಂಪಡೆಯಲು ಸಿದ್ಧ ಎಂದಿದ್ದಾರೆ.
ಪ್ರಕರಣ:
ರಾಮ್ದೇವ್ ವಿರುದ್ಧ ಲಖನೌನ ಮಹಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) 171(ಜಿ) ಕಲಂ (ಚುನಾವಣಾ ಸಂಬಂಧ ಸುಳ್ಳು ಹೇಳಿಕೆ) ಅನ್ವಯ ಎಫ್ಐಆರ್ ದಾಖಲಾಗಿದೆ.
‘ರಾಮ್ದೇವ್ ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೊ ದೃಶ್ಯಗಳನ್ನು ವೀಕ್ಷಿಸಿ, ವಿಶ್ಲೇಷಿಸಿದ ನಂತರವೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಬೀಬುಲ್ ಹಸನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.