ಲಖನೌ: ಉತ್ತರಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ ಮೂವರು ದಲಿತ ಬಾಲಕಿಯರ ಮೇಲೆ ಏಳು ಜನರ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಈಚೆಗೆ ನಡೆದಿದೆ.
ಇದೇ ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಗುಂಪೊಂದು ಇಬ್ಬರು ದಲಿತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಮರಕ್ಕೆ ನೇಣು ಹಾಕಿ, ಹತ್ಯೆ ಮಾಡಿತ್ತು.
ಎರಡು ತಿಂಗಳ ಹಿಂದೆ ನಡೆದ ಈ ಘಟನೆ ಮರೆಯುವ ಮುನ್ನವೇ ಬದಾಯೂಂ ಜಿಲ್ಲೆಯಲ್ಲಿ ಮತ್ತೆ ದಲಿತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ದುರ್ಘಟನೆ ಭಾನುವಾರ ನಡೆದಿದ್ದು, ಮಂಗಳವಾರ ಬಾಲಕಿಯರ ತಂದೆ–ತಾಯಿ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿದೆ ಬಂದಿದೆ.
ಆದರೆ, ಪೊಲೀಸರು ಈ ಘಟನೆಯನ್ನು ಸಾಮೂಹಿಕ ಅತ್ಯಾಚಾರ ಘಟನೆ ಎಂದು ದಾಖಲಿಸದೇ, ಥಳಿತ ಮತ್ತು ಲೈಂಗಿಕ ಕಿರುಕುಳ ಪ್ರಕರಣ ಎಂದು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ: ಜುಲೈ 6ರಂದು ಮೂವರು ದಲಿತ ಬಾಲಕಿಯರು ಹಸುಗಳಿಗಾಗಿ ಹುಲ್ಲು ಸಂಗ್ರಹಿಸಲು ಗ್ರಾಮದ ಹೊರಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅದೇ ಗ್ರಾಮದ ಮೂವರು ಯುವಕರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ, ತಮ್ಮ ಇತರ ನಾಲ್ವರು ಮಿತ್ರರನ್ನು ಕರೆಸಿಕೊಂಡಿದ್ದಾರೆ. ಬಾಲಕಿಯೊಬ್ಬಳ ಸಹೋದರ ರಕ್ಷಣೆಗಾಗಿ ಸ್ಥಳಕ್ಕೆ ಧಾವಿಸಿದಾಗ, ಆತನನ್ನು ಯುವಕರ ಗುಂಪು ಚೆನ್ನಾಗಿ ಥಳಿಸಿದೆ. ನಂತರ ಆ ಗುಂಪು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎನ್ನಲಾಗಿದೆ.
ಹೊಸದಾಗಿ ಶವಪರೀಕ್ಷೆ ನಡೆಸಲು ನಿರ್ಧಾರ
ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ಬದಾಯೂಂನಲ್ಲಿ ಅತ್ಯಾಚಾರಕ್ಕೆ ಒಳಗಾಗಿ, ಕೊಲೆಯಾದ ಇಬ್ಬರು ಬಾಲಕಿಯರ ಶವಪರೀಕ್ಷೆ-ಯನ್ನು ಹೊಸದಾಗಿ ನಡೆಸಲು ಸಿಬಿಐ ನಿರ್ಧರಿಸಿದೆ.