ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಸಮೀಪದ ಕಾಶಿನಗರದಲ್ಲಿ ಮಂಗಳವಾರ ರಾತ್ರಿ ಧನುಕೋಟಿ (53) ಎಂಬಾತ 14 ವರ್ಷದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾಚಾರ ಮಾಡಲೆತ್ನಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ತಮಿಳುನಾಡಿನ ಧನುಕೋಟಿ, ಗಾರೆ ಕೆಲಸ ಮಾಡುತ್ತಿದ್ದ. ವಿವಾಹಿತನಾದ ಆತ ಕುಟುಂಬ ಸದಸ್ಯರೊಂದಿಗೆ ಕುಮಾರಸ್ವಾಮಿಲೇಔಟ್ನ ಚಂದ್ರಾನಗರದಲ್ಲಿ ವಾಸವಾಗಿದ್ದ.
ಬಾಲಕಿಯ ಪೋಷಕರಿಗೆ ಪರಿಚಿತನಾದ ಧನುಕೋಟಿ, ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದ. ಅದೇ ರೀತಿ ಆತ ರಾತ್ರಿ ಪಾನಮತ್ತನಾಗಿ ಅವರ ಮನೆಗೆ ಹೋಗಿದ್ದ. ಆಗ ಬಾಲಕಿ, ಆಕೆಯ ಅಕ್ಕ ಮತ್ತು ಸಂಬಂಧಿಕರ ಮಗಳು ಮಾತ್ರ ಮನೆಯಲ್ಲಿದ್ದರು. ಪೋಷಕರು ಹೊರಗೆ ಹೋಗಿದ್ದರು. ಈ ಸಂಗತಿಯನ್ನು ತಿಳಿದ ಆತ ನಡುಮನೆಯಲ್ಲಿ ಕುಳಿತಿದ್ದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆಯ ತುಟಿಗಳನ್ನು ಕಚ್ಚಿ, ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ ಬಾಲಕಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಈ ವೇಳೆ ಕೊಠಡಿಯಲ್ಲಿದ್ದ ಆಕೆಯ ಅಕ್ಕ ಮತ್ತು ಸಂಬಂಧಿಕರ ಮಗಳು ಹೊರ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ 10 ಗಂಟೆಗೆ ಮನೆಗೆ ಬಂದ ಪೋಷಕರು ಮಕ್ಕಳಿಂದ ಘಟನೆಯ ಮಾಹಿತಿ ಪಡೆದು ಠಾಣೆಗೆ ದೂರು ನೀಡಿದರು. ನಂತರ ಧನುಕೋಟಿಯನ್ನು ಬಂಧಿಸಲಾಯಿತು. ಆತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ (ಪೋಕ್ಸೊ) ಹಾಗೂ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಷ ಕುಡಿದು ಆತ್ಮಹತ್ಯೆ
ಅರಕೆರೆಯಲ್ಲಿ ಮಂಗಳವಾರ ರಾತ್ರಿ ಸುರೇಶ್ (30) ಎಂಬುವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಪಾಳ ಮೂಲದ ಅವರು ಪತ್ನಿ ಸುನಿತಾ ಜತೆ ಅರಕೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಾರು ಚಾಲಕರಾಗಿದ್ದ ಸುರೇಶ್, ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣಕಾಸಿನ ವಿಷಯವಾಗಿ ಪತಿ ಮತ್ತು ಅವರ ಸ್ನೇಹಿತರ ನಡುವೆ ರಾತ್ರಿ ಜಗಳವಾಯಿತು. ಆಗ ಪತಿಯ ಮೇಲೆ ಸ್ನೇಹಿತರು ಹಲ್ಲೆ ನಡೆಸಿದರು. ಇದರಿಂದ ಹೃದಯಾಘಾತವಾಗಿ ಪತಿ ಸಾವನ್ನಪ್ಪಿದರು ಎಂದು ಸುನಿತಾ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಆಧರಿಸಿ ಮೊದಲು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ಹೇಳಿಕೆ ಬದಲಿಸಿದ ಸುನಿತಾ, ಪತಿ ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಹುಳಿಮಾವು ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.