ಬೆಂಗಳೂರು: ‘ನಗರದ ಬಾಲಭವನದ ಅಭಿವೃದ್ಧಿಗಾಗಿ ರೂ 2 ಕೋಟಿ ನೀಡಲಾಗುವುದು. ಬಾಲಭವನದ ನವೀಕರಣ ಕಾರ್ಯವನ್ನು ಸದ್ಯದಲ್ಲಿಯೇ ಕೈಗೊಳ್ಳಲಾಗುವುದು’ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದರು.
ಇನ್ಫೊಸಿಸ್ ಪ್ರತಿಷ್ಠಾನವು ನಗರದ ಬಾಲಭವನದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಸ್ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಕ್ಕಳಿಗೆ ಉತ್ತಮ ಸೌಲಭ್ಯ ಒದಗಿಸಲು ಪ್ರತಿಷ್ಠಾನವು ಮುಂದಾಗಿದೆ. ಬೆಂಗಳೂರು ಬಾಲಭವನಕ್ಕೆ ಒಂದು ಬಸ್ ಹಸ್ತಾಂತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಧಾರವಾಡ, ಉಡುಪಿ ಮತ್ತು ಬೀದರ್ ಜಿಲ್ಲಾ ಬಾಲಭವನಗಳಿಗೆ ತಲಾ ಒಂದು ಬಸ್ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಸಚಿವೆ ಉಮಾಶ್ರೀ ಮಾತನಾಡಿ, ‘ಬಾಲಭವನ ಸೊಸೈಟಿಯು ಮಕ್ಕಳಲ್ಲಿ ಕ್ರಿಯಾತ್ಮಕ ಹಾಗು ಸೃಜನಾತ್ಮಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ಕೆ ಬಲತುಂಬುವ ನಿಟ್ಟಿನಲ್ಲಿ ಸುಧಾಮೂರ್ತಿಯವರು ಬಸ್ ನೀಡುವುದರ ಮೂಲಕ ಬಾಲಭವನದ ಅಭಿವೃದ್ಧಿಗೆ ಸಹಕಾರ ನೀಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
40 ಆಸನವುಳ್ಳ ಬಸ್ ಇದಾಗಿದೆ. ಭವನವು ಏರ್ಪಡಿಸುವ ಮಕ್ಕಳ ಬೇಸಿಗೆ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಬಸ್ ಅನ್ನು ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್, ಬಾಲಭವನ ಸೊಸೈಟಿಯ ಕಾರ್ಯದರ್ಶಿ ಎನ್.ಪಂಕಜ ಇದ್ದರು.