ಬಿಸಿಲ ಧಗೆಯಿಂದ ಪಾರಾಗಲು ನೀರಾಟವೂ ಒಂದು ಉತ್ತಮ ಮಾರ್ಗ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ರಜೆಯಲ್ಲಿ ಮಕ್ಕಳು ಮೂರ ಹೊತ್ತೂ ಹತ್ತಿರವಿರುವ ಕೆರೆ, ಹಳ್ಳ, ನದಿಗಳಲ್ಲೇ ಈಜಾಡುತ್ತಾ ಮೋಜು ಮಾಡುತ್ತಿರುತ್ತಾರೆ. ಇದಕ್ಕೆಂದೇ ನಗರಗಳಲ್ಲಿ ಬೇಸಿಗೆ ಈಜು ಶಿಬಿರಗಳನ್ನೂ ಆಯೋಜಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಬಿಸಿಲ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗೂ ಮೀರಿದೆ. ಬಿಸಿಲ ಬೇಗೆ ತಾಳಲಾರದೆ ಜಮ್ಮುವಿನ ಹೊರವಲಯದ ತವೀ ನದಿಯಲ್ಲಿ ಮಕ್ಕಳು ನೀರಾಟದ ಆನಂದ ಪಡೆಯುತ್ತಿದ್ದಾರೆ. ಆ ಹೊತ್ತಿಗೆ ದೇಹವನ್ನು ತಂಪಾಗಿಸಿಕೊಳ್ಳಲು ನೀರಿಗಿಳಿದಿದ್ದ ಎಮ್ಮೆಗಳು ಮಕ್ಕಳ ಆಟಕ್ಕೆ ಜತೆಯಾದವು. ಎಮ್ಮೆ ಮೇಲೆ ಹತ್ತಿ ನೀರಿಗೆ ಧುಮುಕುವುದು, ಅದರ ಮೇಲೆ ಹತ್ತಿನಿಂತು ಸವಾರಿ ಮಾಡುವುದು, ಕೀಟಲೆ ಮಾಡಿ ಎಮ್ಮೆಯನ್ನು ಅತ್ತಿಂದಿತ್ತ ಓಡಿಸುವುದು... ಹೀಗೆ ಮಕ್ಕಳು ಏನೇ ಮಾಡಿದರೂ ಸಹ ಎಮ್ಮೆಗಳು ತಲೆಕೆಡಿಸಿಕೊಳ್ಳದೆ ತಂಪಾದ ನೀರಿಗೆ ಮೈಯ್ಯೊಡ್ಡಿ ಹಾಯಾಗಿ ನಿಂತಿದ್ದವು.