ನವದೆಹಲಿ: ಸಂಸದ ಮತ್ತು ಕರ್ನಾಟಕದ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಅಧಿಕಾರ ಸ್ವೀಕರಿಸಿದ ವಾರದೊಳಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಶನಿವಾರ ಪದಾಧಿಕಾರಿಗಳ ತಂಡವನ್ನು ಪುನರ್ರಚಿಸಿದ್ದು, ನೆಹರು– ಗಾಂಧಿ ಕುಟುಂಬದ ಸದಸ್ಯ ವರುಣ್ ಗಾಂಧಿ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟಿದ್ದಾರೆ. ಯಡಿಯೂರಪ್ಪ ಅವರ ಸಂಘಟನಾ ಸಾಮರ್ಥ್ಯ ಅರಿತೇ ಅವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಅವರು ಷಾ ಅವರ ತಂಡ ಸೇರಿರುವ ಕರ್ನಾಟಕದ ಏಕೈಕ ಹಿರಿಯ ನಾಯಕ. ಇವರ ಜೊತೆ ರಾಜ್ಯದಿಂದ ಸಂತೋಷ್ ಮತ್ತು ಸತೀಶ್ ಅವರನ್ನು ಸಂಘಟನಾ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.
ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರ ಪುತ್ರ ಸುಲ್ತಾನ್ಪುರ ಕ್ಷೇತ್ರದ ಲೋಕಸಭೆ ಸದಸ್ಯ ವರುಣ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ. ಮೇನಕಾ ಇತ್ತೀಚೆಗೆ ‘ಫಿಲಿಬೀಟ್’ನಲ್ಲಿ ನಡೆದ ಸಮಾರಂಭವೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಮಗ ಯೋಗ್ಯ ಅಭ್ಯರ್ಥಿ ಎಂದು ಹೇಳುವ ಮೂಲಕ ತಮ್ಮ ಅಂತರಂಗದ ಬಯಕೆಯನ್ನು ಹೊರ ಹಾಕಿದ್ದರು.
ವರುಣ್ ಅವರನ್ನು ಪದಾಧಿಕಾರಿ ಸ್ಥಾನದಿಂದ ಕೈಬಿಡುವ ಮೂಲಕ ಬಿಜೆಪಿಗೆ ಗಾಂಧಿ ಕುಟುಂಬದ ಸದಸ್ಯರೂ ಸೇರಿದಂತೆ ಯಾರೂ ಅನಿವಾರ್ಯವಲ್ಲ ಎನ್ನುವ ಸಂದೇಶ ಕಳುಹಿಸಲಾಗಿದೆ. ಅಮಿತ್ ಷಾ ಅವರ ತಂಡದಲ್ಲಿ ಕೆಲವರನ್ನು ಬಿಟ್ಟರೆ ಉಳಿದವರೆಲ್ಲರೂ ಹೊಸ ಮುಖಗಳು. ಬಿಜೆಪಿ ಅಧ್ಯಕ್ಷರು ಹೊಸ ಚಿಗುರು ಮತ್ತು ಹಳೇ ಬೇರುಗಳನ್ನು ಒಟ್ಟುಗೂಡಿಸಿಕೊಂಡು ಪಕ್ಷ ಬಲಗೊಳಿಸುವ ಸಾಹಸಕ್ಕೆ ಮುಂದಾಗಿದ್ದಾರೆ.
ಬಿಜೆಪಿಯೊಳಗೆ ಮೊದಲ ಬಾರಿಗೆ ಗುಂಪುಗಾರಿಕೆಗೆ ಅವಕಾಶವಿಲ್ಲದಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಹುತೇಕ ಪದಾಧಿಕಾರಿಗಳು ಹೊಸಬರಾಗಿದ್ದರೂ, ಎಲ್ಲರ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ಷಾ ಅವರಿಗೆ ಮಾಹಿತಿ ಇದೆ. ಅದನ್ನು ನೋಡಿಕೊಂಡೇ ಯಾರಿಗೆ ಯಾವ ಹುದ್ದೆ ಎಂಬುದನ್ನು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಲ್ಲ ರಾಜ್ಯಗಳಿಗೂ ಪದಾಧಿಕಾರಿಗಳ ತಂಡದಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿದ್ದರೂ, ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ವಿಧಾನಸಭೆ ಚುನಾವಣೆಗೆ ಹೋಗಲಿರುವ ರಾಜ್ಯಗಳಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶ, ಬಿಹಾರದಲ್ಲಿ ಲೋಕಸಭೆ ಚುನಾವಣೆ ಗೆದ್ದು ಮೇಲ್ಪಂಕ್ತಿ ಹಾಕಿರುವ ಅಮಿತ್ ಷಾ, ತಮ್ಮ ತಂಡದ ಉಳಿದ ಸದಸ್ಯರಿಗೂ ಚುನಾವಣೆ ಗೆಲ್ಲುವ ಸವಾಲು ನೀಡಿದ್ದಾರೆ.
ಹಿಂದುಳಿದ ವರ್ಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡುವ ಮೂಲಕ ಪಕ್ಷ ಯಾರನ್ನೂ ಕಡೆಗಣಿಸಿಲ್ಲ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಹಿಂದುಳಿದ ವರ್ಗದ ಐವರು, ಆರು ಮಂದಿ ಮಹಿಳೆಯರಿಗೆ ಷಾ ತಮ್ಮ ತಂಡದಲ್ಲಿ ಸ್ಥಾನ ಕಲ್ಪಿಸಿದ್ದಾರೆ. ಹೊಸ ಪದಾಧಿಕಾರಿಗಳಲ್ಲಿ ಶೇ. 80ರಷ್ಟು ನಾಯಕರು 60 ವರ್ಷಕ್ಕಿಂತ ಕೆಳಗಿನ ವಯಸಿನವರು.
ಆರ್ಎಸ್ಎಸ್ನಿಂದ ಈಚೆಗಷ್ಟೆ ಬಿಜಿಪಿ ಸೇರಿದ್ದ ರಾಂ ಮಾಧವ್ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿ ನೇಮಕ ಮಾಡುವ ಮೂಲಕ ಬಿಜೆಪಿ ಮತ್ತು ಆರ್ಎಸ್ಎಸ್ ನಡುವೆ ಸಮನ್ವಯತೆ ಕಾಯ್ದುಕೊಳ್ಳಲಾಗಿದೆ.
ಮೊರೆ ಈಡೇರಿಸಿದ್ದಾರೆ
ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುವ ಅಪೇಕ್ಷೆಯನ್ನು ನಾನೆಂದೂ ಹೊಂದಿರಲಿಲ್ಲ. ಬದಲಾಗಿ, ಪಕ್ಷ ಸಂಘಟನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಇದೀಗ ಪಕ್ಷದ ವರಿಷ್ಠರು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಿ ಬಹುದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ.
–ಬಿ.ಎಸ್.ಯಡಿಯೂರಪ್ಪ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.