ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುಗಡೆಯಾಗದ ರಾಜೀವ್‌ಗಾಂಧಿ ಫೆಲೋಶಿಪ್‌

ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಪರದಾಟ
Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿದ್ಯಾ­ಲಯ ಧನಸಹಾಯ ಆಯೋಗ (ಯುಜಿಸಿ) ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್‌ಇಟಿ) ಹಾಗೂ  ರಾಜೀವ್‌­­ಗಾಂಧಿ ಫೆಲೋಶಿಪ್‌ಗೆ ಕಿರು ಸಂಶೋಧನಾ ವಿದ್ಯಾರ್ಥಿಗಳಾಗಿ (ಜೆಆರ್‌ಎಫ್‌) ಆಯ್ಕೆಯಾಗಿ­ರುವ ಹಲವು ಸಂಶೋಧನಾ ವಿದ್ಯಾರ್ಥಿಗಳಿಗೆ ಹಲವು ತಿಂಗಳಿಂದ ಶಿಷ್ಯವೇತನವೇ ದೊರಕಿಲ್ಲ.

ಜೆಆರ್‌ಎಫ್‌ಗೆ ಬೆಂಗಳೂರು ವಿಶ್ವವಿದ್ಯಾ­ಲಯದ ವಿವಿಧ ವಿಭಾಗಗಳಿಗೆ ಆಯ್ಕೆಯಾಗಿ­ರುವ ಕೆಲ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಆಯ್ಕೆ­ಯಾ­ಗಿರುವ ಅನುಮೋದನೆ ಪತ್ರವೂ ಬಂದಿಲ್ಲ.

‘ಶಿಷ್ಯವೇತನ ಹಾಗೂ  ಅನುಮೋದನೆಯ ಪ್ರಮಾಣ ಪತ್ರ ವಿಚಾರವಾಗಿ ಒಂದು ವರ್ಷದಿಂದ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿ­ಕೊಂಡರೂ  ಯಾವುದೇ ಕ್ರಮ ಕೈಗೊಂ­ಡಿಲ್ಲ’ ಎಂದು ಸಂಶೋಧನಾ ವಿದ್ಯಾರ್ಥಿಗಳು ದೂರುತ್ತಾರೆ.

‘ವಿವಿ ಹಲವು ವಿದ್ಯಾರ್ಥಿಗಳ ಹಣವನ್ನು ಬಾಕಿ ಉಳಿಸಿಕೊಂಡಿರುವ ಕಾರಣ ಸಂಶೋಧನೆ ಮುಗಿದ ನಂತರವೂ ಬಾಕಿ ಹಣಕ್ಕಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾ­ಲಯಕ್ಕೆ ಅಲೆಯುವಂತಾಗಿದೆ’ ಎಂದು ಹಿರಿಯ ವಿದ್ಯಾರ್ಥಿ­ಯೊಬ್ಬರು ತಮ್ಮ ಅಳಲು ತೋಡಿಕೊಂಡರು.

‘ಈ ವಿಚಾರವನ್ನು ಕುಲಪತಿ  ಮತ್ತು ಕುಲ­ಸಚಿವರ ಗಮನಕ್ಕೆ ತಂದರೆ ಅಧಿಕಾರಿಗಳಿಗೆ ಹೇಳು­ವು­ದಾಗಿ ಹೇಳುತ್ತಾರೆ. ಆದರೆ, ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಒತ್ತಾಯ ಮಾಡಿದರೆ ನೀವೇ ನವ­ದೆಹಲಿಗೆ ಹೋಗಿ ವಿಚಾ­ರಿಸಿ­ಕೊಂಡು ಬನ್ನಿ ಎನ್ನುವ ಉತ್ತರ ನೀಡುತ್ತಾರೆ’ ಎಂದು ಹೆಸರು ಬಹಿರಂಗ­ಪಡಿಸಲು ಬಯಸದ ಸಂಶೋಧನಾ ವಿದ್ಯಾರ್ಥಿಯೊಬ್ಬರು ಆರೋಪಿಸುತ್ತಾರೆ.

ಯುಜಿಸಿ ನಿಯಮಾವಳಿಗಳ ಪ್ರಕಾರ ರಾಜೀವ್‌­ಗಾಂಧಿ ಫೆಲೋಶಿಪ್‌ಗೆ ಆಯ್ಕೆಯಾಗಿ­ರುವ ಪರಿ­ಶಿಷ್ಟ ಜಾತಿ ಮತ್ತು ಪಂಗಡಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಹಾಗೂ ಶಿಷ್ಯವೇತನವನ್ನು ನೀಡುವುದು ವಿವಿಯ ಜವಾ­ಬ್ದಾರಿ. ಯುಜಿಸಿಯ ರಾಜೀವ್‌ಗಾಂಧಿ ಫೆಲೋ­ಶಿಪ್‌ ನಿಯಮಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ವಿಶ್ವವಿದ್ಯಾಲಯದ ನಿಧಿಯಿಂದ ಹಣ­ವನ್ನು ಬಿಡುಗಡೆ ಮಾಡುವಂತೆ ಹಾಗೂ  ವಿದ್ಯಾರ್ಥಿ­­ಗಳಿಂದ ಲೆಕ್ಕ ಪತ್ರ­ಗಳನ್ನು ಪಡೆದು ಮತ್ತೆ ಯುಜಿಸಿ­ಯಿಂದ ಹಣ ಬಿಡುಗಡೆ ಮಾಡಿಸಿ­ಕೊಳ್ಳ­ಬೇಕು ಎಂದು ಉಲ್ಲೇಖಿಸಲಾಗಿದೆ.

ಆದರೆ, ವಿವಿಯ ಅಧಿಕಾರಿಗಳು ನಿಯಮವನ್ನು ಅರಿಯದೆ ಯುಜಿಸಿಯಿಂದ ಹಣ ಬಂದಿಲ್ಲ ಎಂದು ಉತ್ತರಿಸುತ್ತಾರೆ ಎಂದು ಸಂಶೋಧನಾ ವಿದ್ಯಾರ್ಥಿ­ಗಳು ಆರೋಪಿಸುತ್ತಾರೆ. ‘ಪಟ್ಟಿಯಲ್ಲಿ ಒಟ್ಟು 7 ವಿದ್ಯಾರ್ಥಿಗಳ ಹೆಸರು ಬಿಟ್ಟು ಹೋಗಿತ್ತು. ಈ ಸಮಸ್ಯೆಯನ್ನು ಬಗೆ­ಹರಿ­ಸುವ ಸಲುವಾಗಿಯೇ ವಿವಿಯಿಂದ ಹಿರಿಯ ಅಧಿಕಾರಿ­ಯೊಬ್ಬರನ್ನು ನವದೆಹಲಿಯಲ್ಲಿ ನೇಮಿಸ­­ಲಾಗಿದೆ. ಅವರು ಈಗಾಗಲೇ 4 ವಿದ್ಯಾರ್ಥಿ­ಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಿದ್ದು, ಉಳಿದ ವಿದ್ಯಾರ್ಥಿಗಳ ಹೆಸರನ್ನು ಆದಷ್ಟು ಬೇಗ ಸೇರಿಸಿ ಅವರಿಗೆ ಪತ್ರ ಹಾಗೂ ಶಿಷ್ಯವೇತನ ಕೊಡಿ­ಸಲು ಯತ್ನಿಸುತ್ತೇವೆ’ ಎಂದು ವಿವಿಯ ಅಧಿಕಾರಿ­ಗಳು ಹೇಳುತ್ತಾರೆ.
* * *
ಯುಜಿಸಿಯಿಂದ ಹಣ ಬರುವುದು ತಡವಾಗಿದ್ದ ಕಾರಣ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಶಿಷ್ಯ­ವೇತನ ನೀಡಲು ಸಾಧ್ಯವಾಗಿರಲಿಲ್ಲ. ಕುಲಪತಿ ಅವರು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ನಿಧಿ­­ಯಿಂದ ಹಣ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ವಿದ್ಯಾರ್ಥಿಗಳಿಗೆ ಶಿಷ್ಯ­ವೇತನ ದೊರೆಯಲಿದೆ.  ಅನುಮೋದನೆ ಪತ್ರ ವಿಚಾರ ಯುಜಿಸಿಗೆ ಸಂಬಂಧಿಸಿದ ವಿಷಯವಾಗಿದೆ.
–ಕೆ.ಕೆ.ಸೀತಮ್ಮ, ಕುಲಸಚಿವೆ, ಆಡಳಿತ, ಬೆಂ.ವಿ.ವಿ.

2011 ರಿಂದಲೂ ಯುಜಿಸಿಯಿಂದ ಈ ರೀತಿಯ ಸಮಸ್ಯೆಗಳು ಆಗುತ್ತಲೇ ಇದೆ. ಸಂಶೋಧನೆಗೆ ಆಯ್ಕೆ­ಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಯುಜಿಸಿಯಿಂದ ವಿವಿಗೆ ಕಳಿಸುವಾಗ ಕೆಲ ವಿದ್ಯಾರ್ಥಿಗಳ ಹೆಸರು ಬಿಟ್ಟು ಹೋಗಿರುತ್ತವೆ. ಇದರಲ್ಲಿ ವಿವಿಯ ಪಾತ್ರವೇ ಇಲ್ಲ ಆದರೆ ವಿದ್ಯಾರ್ಥಿಗಳು ವಿವಿ­ಯನ್ನು ದೂಷಿಸುತ್ತಾರೆ.     
-–ರಮೇಶ್‌, ನಿರ್ದೇಶಕರು,
ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯನಿರ್ಧಾರಕ ಮಂಡಳಿ. ಬೆಂ.ವಿ.ವಿ.


ವಿವಿಯು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಧನ ಆಯೋಗದಿಂದ ಬರುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ವಿವಿಯು  ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಕುಲಪತಿ ಮತ್ತು ಕುಲಸಚಿವರು ಸಹ ಈ ಬಗ್ಗೆ ಚಿಂತನೆ ನಡೆಸುವುದಿಲ್ಲ.
–ಅರ್ಜುನ್‌,
ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ.


ಯುಜಿಸಿಗೆ ಹಲವು ಬಾರಿ ದಾಖಲೆಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ದೇಶದ ಸುಮಾರು 200 ವಿಶ್ವವಿದ್ಯಾಲಯಗಳಿಂದ ಪ್ರತಿ ವರ್ಷ ಆಯ್ಕೆಯಾಗುವ 75 ಸಾವಿರಕ್ಕೂ ಹೆಚ್ಚು ಸಂಶೋ­ಧನಾ ವಿದ್ಯಾರ್ಥಿಗಳ ದಾಖಲೆಗಳನ್ನು  ಪರಿಶೀಲಿಸಲು ಕೇವಲ ಒಬ್ಬ ಕೇಸ್‌ ವರ್ಕರ್‌ ಇದ್ದಾರೆ. ಇದರಿಂದ ಸಮಸ್ಯೆ ಉಲ್ಬಣವಾಗಿದೆ’
–ರಾಜಶೇಖರ್‌ ಸವನೂರು,
ದೆಹಲಿಯಲ್ಲಿರುವ ವಿವಿಯ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT