ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 20 ಸದಸ್ಯರನ್ನು ನಾಮಕರಣ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಇದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಾಲಿಕೆಗೆ ನಡೆದ ಮೊದಲ ನಾಮಕರಣ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ನಾಮಕರಣವನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರದ್ದು ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಸದಸ್ಯರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಾಮಕರಣ ರದ್ದತಿ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಇತ್ತೀಚೆಗೆ ಈ ತಡೆಯಾಜ್ಞೆ ತೆರವು ಮಾಡಲಾಗಿತ್ತು. ಆದ್ದರಿಂದ ಹೊಸದಾಗಿ ಸದಸ್ಯರನ್ನು ನಾಮಕರಣ ಮಾಡಿ ಆಗಸ್ಟ್ 30ರಂದು ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿ ಸದಸ್ಯರ ನಾಮಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಿವಿಲ್ ಮೇಲ್ಮನವಿ ಬಗ್ಗೆ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ಈ ನಾಮಕರಣ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಾಮಕರಣ ಸದಸ್ಯರು: ಎಚ್.ಎಸ್.ಸೈಯದ್ ಅಮಾನುಲ್ಲಾ (ಕೆ.ಆರ್.ಪುರ), ಎಚ್.ರಾಮಮೂರ್ತಿ (ಯಶವಂತಪುರ), ಜಿ.ಎಸ್.ಕೃಷ್ಣಮೂರ್ತಿ (ದಾಸರಹಳ್ಳಿ), ಭಾಸ್ಕರ ರೆಡ್ಡಿ (ಮಹದೇವಪುರ), ಕೆ.ವಿ.ಪಟೇಲ್ರಾಜು (ಬೊಮ್ಮನಹಳ್ಳಿ), ಜಿ.ಆನಂದಮೂರ್ತಿ (ಮಹಾಲಕ್ಷ್ಮಿ ಬಡಾವಣೆ), ನೂರ್ಜಾನ್ (ಪುಲಿಕೇಶಿನಗರ), ಕೆ.ಮಂಜುನಾಥ್ (ಸಿ.ವಿ.ರಾಮನ್ನಗರ), ಎ.ಬಿ.ಖದೀರ್ ಹಾಜಿ (ಶಾಂತಿನಗರ), ಎಚ್.ವಿಜಯಕುಮಾರ್ (ರಾಜಾಜಿನಗರ).
ಟಿ.ರಮೇಶ್ (ವಿಜಯನಗರ), ಎನ್.ಅಮರೇಶ್ (ಚಿಕ್ಕಪೇಟೆ), ಜೆ.ನಟರಾಜ್ (ಶಿವಾಜಿನಗರ), ಲಕ್ಷ್ಮೀಪತಿ (ಪದ್ಮನಾಭನಗರ), ಆರ್.ಶೋಭಾ (ಜಯನಗರ), ಡಿ.ರಘು ಮತ್ತು ಜೆ.ಜಾನ್ (ಸರ್ವಜ್ಞನಗರ), ಎಲ್.ಲಿಂಗಯ್ಯ (ಗಾಂಧಿನಗರ), ಸಂಪತ್ (ಬಿ.ಟಿ.ಎಂ.ಬಡಾವಣೆ) ಹಾಗೂ ಕೆ.ಇ.ಹರೀಶ್ (ಮಲ್ಲೇಶ್ವರ).