ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತ ಮಂಡಳಿಯನ್ನು ವಿಸರ್ಜನೆ ಮಾಡಿ ನಗರಾಭಿವೃದ್ಧಿ ಇಲಾಖೆ ಶನಿವಾರ ಆದೇಶ ಹೊರಡಿಸಿದೆ. ಇದರಿಂದಾಗಿ ಪಾಲಿಕೆಯ ನಾಮ ಕರಣ ಸದಸ್ಯರೂ ಸೇರಿದಂತೆ 198 ಸದಸ್ಯರು ಸದಸ್ಯತ್ವ ಕಳೆದು ಕೊಂಡಂತಾಗಿದೆ.
ವಿಸರ್ಜನೆಯ ಬೆನ್ನಲ್ಲೇ ಗ್ರಾಮೀಣಾ ಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರನ್ನು ಬಿಬಿಎಂಪಿ ಆಡಳಿತಾಧಿಕಾರಿ ಯಾಗಿ ನೇಮಿಸಿದ್ದು, ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಬಿಬಿಎಂಪಿ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ, ರಾಜ್ಯ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್ ನಾಯಕ್ ಅವರನ್ನು ವರ್ಗ ಮಾಡಲಾಗಿದೆ. ಇದುವರೆಗೂ ಆ ಹುದ್ದೆಯಲ್ಲಿದ್ದ ಎಂ. ಲಕ್ಷ್ಮೀನಾರಾಯಣ ಅವರಿಗೆ ಯಾವುದೇ ಜಾಗ ತೋರಿಸಿಲ್ಲ.
ವಿಸರ್ಜನೆಯ ಅಸ್ತ್ರ: ಚುನಾವಣೆ ಮುಂದೂಡುವುದಕ್ಕೆ ನಾನಾ ರೀತಿಯ ಕಸರತ್ತು ನಡೆಸುತ್ತಿರುವ ರಾಜ್ಯ ಸರ್ಕಾರ ಅಂತಿಮವಾಗಿ ವಿಸರ್ಜನೆಯ ಅಸ್ತ್ರ ಬಿಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾನೂನು ಪ್ರಕಾರ, ವಿಸರ್ಜಿತ ಪಾಲಿಕೆಯ ಉಳಿಕೆ ಅವಧಿ ಆರು ತಿಂಗಳಿಗಿಂತ ಹೆಚ್ಚು ಇದ್ದಲ್ಲಿ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು. ಆದರೆ, ಬಿಬಿಎಂಪಿಯ ಅಧಿಕಾರಾವಧಿ ಇರುವುದು ಇನ್ನು ಕೇವಲ ನಾಲ್ಕು ದಿನ. ಹೀಗಾಗಿ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎನ್ನುವ ನಿಯಮ ಬಿಬಿಎಂಪಿಗೆ ಅನ್ವಯಿಸುವುದಿಲ್ಲ’ ಎಂದು ಕಾನೂನು ತಜ್ಞರು ಹೇಳುತ್ತಾರೆ.
ಈ ಅಂಶವನ್ನೇ ಗುರಾಣಿಯಾಗಿ ಇಟ್ಟುಕೊಂಡು ಚುನಾವಣೆ ಮುಂದೂ ಡುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂಬುದು ಪ್ರತಿಪಕ್ಷಗಳ ಆರೋಪ.
ಅಕ್ರಮಗಳ ಪಟ್ಟಿ: ವಿಸರ್ಜನೆ ಕುರಿತ ಸರ್ಕಾರಿ ಆದೇಶದಲ್ಲಿ ಪಾಲಿಕೆಯ ಅಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಅಸಮರ್ಪಕ ಘನ ತ್ಯಾಜ್ಯ ವಿಲೇವಾರಿ, ಜಾಹೀರಾತು ವಿಭಾಗದಲ್ಲಿ ಅವ್ಯವಹಾರ, ಅಕ್ರಮವಾಗಿ ಟೆಂಡರ್ ಕೊಟ್ಟಿರುವುದು, ಅನಧಿಕೃತ ಫ್ಲೆಕ್ಸ್ಗಳ ಪ್ರದರ್ಶನ ಇತ್ಯಾದಿ ಅಕ್ರಮಗಳ ಬಗ್ಗೆ ಪಟ್ಟಿ ಮಾಡಲಾಗಿದೆ.
ಚುನಾವಣಾ ಆಯೋಗದ ನಿಲುವು ಬದಲಿಲ್ಲ: ಬಿಬಿಎಂಪಿ ವಿಸರ್ಜನೆಯಾಗಿ ದ್ದರೂ ತಕ್ಷಣವೇ ಚುನಾವಣೆ ನಡೆಸಬೇ ಕೆನ್ನುವ ನಿಲುವಿನಲ್ಲಿ ಯಾವುದೇ ಬದ ಲಾವಣೆ ಇಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ಹೇಳಿವೆ.
ಮೇ 30ರೊಳಗೆ ಚುನಾವಣೆ ನಡೆಸಲು ಹೈಕೋರ್ಟ್ ಏಕಸದಸ್ಯ ಪೀಠ ಸೂಚಿಸಿದೆ. ಆ ಪ್ರಕಾರ ಸಿದ್ಧತೆ ನಡೆದಿದೆ. ಅಬಕಾರಿ ಅಧಿಕಾರಿಗಳ ಸಭೆ ಕೂಡ ಶನಿವಾರ ನಡೆಸಲಾಗಿದೆ. ಸೋಮವಾರ ಸಂಜೆ 4.30ಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಪತ್ರಿಕಾಗೋಷ್ಠಿ ಕರೆಯ ಲಾಗಿದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.