ಪಟ್ನಾ (ಪಿಟಿಐ, ಐಎಎನ್ಎಸ್): ಬಿಹಾರದ ಹೊಸ ಮುಖ್ಯಮಂತ್ರಿ ಜೀತನ ರಾಮ್ ಮಾಂಝಿ ನೇತೃತ್ವದ ಜೆಡಿಯು ಸರ್ಕಾರಕ್ಕೆ ವಿರೋಧಿ ಆರ್ಜೆಡಿ ಗುರುವಾರ ಬೆಂಬಲ ಘೋಷಿಸಿದೆ. ಈ ತೀರ್ಮಾನವನ್ನು ಆರ್ಜೆಡಿ ಶಾಸಕಾಂಗ ಪಕ್ಷದ ನಾಯಕ ಅಬ್ದುಲ್ ಬಾರಿ ಸಿದ್ದಿಕಿ ಸುದ್ದಿಗಾರರಿಗೆ ತಿಳಿಸಿದರು.
ಶುಕ್ರವಾರ ನಡೆಯುವ ವಿಶ್ವಾಸಮತ ಯಾಚನೆಗೆ ಮುನ್ನ ಆರ್ಜೆಡಿ ಬೆಂಬಲ ಪ್ರಕಟಿಸಿರುವುದು ಜೆಡಿಯು ಸರ್ಕಾರಕ್ಕೆ ಬಲ ಸಿಕ್ಕಂತಾಗಿದೆ.
ಯಾವಾಗಲೂ ಸಾಮಾಜಿಕ ನ್ಯಾಯದ ಪರವಿರುವ ಆರ್ಜೆಡಿ, ಮಹಾದಲಿತ ಸಮುದಾಯಕ್ಕೆ ಸೇರಿದ ಮಾಂಝಿ ಅವರಿಗೆ ಎಲ್ಲ ಸಹಕಾರ ನೀಡಲಿದೆ. ಬಿಜೆಪಿ ಮತ್ತು ಆರ್ಎಸ್ಎಸ್ ಪ್ರತಿನಿಧಿಸುತ್ತಿರುವ ಕೋಮುವಾದಿ ಶಕ್ತಿಗಳನ್ನು ಮಣಿಸಲು ಜೆಡಿಯುಗೆ ಬೆಂಬಲ ನೀಡಲಾಗುತ್ತಿದೆ ಎಂದು ಸಿದ್ದಿಕಿ ಹೇಳಿದರು.
ಒಟ್ಟು 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಈಗ 237 ಸದಸ್ಯರಿದ್ದಾರೆ. ಜೆಡಿಯು 117, ಬಿಜೆಪಿ 88, ಆರ್ಜೆಡಿ 21, ಕಾಂಗ್ರೆಸ್ 4, ಸಿಪಿಐ 1 ಹಾಗೂ ಇಬ್ಬರು ಪಕ್ಷೇತರ ಶಾಸಕರು ಇದ್ದಾರೆ. ಇವರಲ್ಲದೆ, ಆರ್ಜೆಡಿಯ 3, ಬಿಜೆಪಿಯ 2 ಹಾಗೂ ಜೆಡಿಯುನ ಒಬ್ಬ ಶಾಸಕರು ಪಕ್ಷಾಂತರದ ಕಾರಣಕ್ಕಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಎರಡು ದಿನಗಳ ಹಿಂದೆ ಕಾಂಗ್ರೆಸ್ ಸಹ ಜೆಡಿಯು ಸರ್ಕಾರಕ್ಕೆ ಬೆಂಬಲ ಪ್ರಕಟಿಸಿದೆ. ಈ ಹಿಂದೆಯೇ ಸಿಪಿಐ ಮತ್ತು ಪಕ್ಷೇತರ ಸದಸ್ಯರು ಜೆಡಿಯುಗೆ ಬೆಂಬಲ ನೀಡಿದ್ದಾರೆ.
ಲಾಲು ಹೇಳಿಕೆ (ನವದೆಹಲಿ ವರದಿ): ಬಿಹಾರದಲ್ಲಿ ಅಧಿಕಾರ ಕಬಳಿಸುವ ಬಿಜೆಪಿ ಸಂಚಿಗೆ ತಡೆಯೊಡ್ಡಲು ಜೆಡಿಯು ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡಿರುವುದಾಗಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಗುರುವಾರ ಇಲ್ಲಿ ತಿಳಿಸಿದರು. ಆದರೆ ರಾಜಕೀಯ ವಿರೋಧಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದೊಂದಿಗೆ ಮುಂದೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಉತ್ತರಿಸಲು ಲಾಲು ನಿರಾಕರಿಸಿದರು.
ಜೀತನ ರಾಮ್ ಮಾಂಝಿ ನೇತೃತ್ವ ಸರ್ಕಾರದ ಕಾರ್ಯನಿರ್ವಹಣೆಯನ್ನು ಎಚ್ಚರಿಕೆಯಿಂದ ವೀಕ್ಷಿಸಲಾಗುವುದೆಂದು ಅವರು ಹೇಳಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಲಾಲು ಅವರು ಲೋಕಸಭೆ ಚುನಾವಣೆಯಲ್ಲಿ ಕೋಮುವಾದದ ಪ್ರಭಾವ ಮಧ್ಯೆಯೂ ಬಿಹಾರದಲ್ಲಿ ಆರ್ಜೆಡಿ, ಕಾಂಗ್ರೆಸ್, ಎನ್ಸಿಪಿ ಮೈತ್ರಿಕೂಟ ತೋರಿದ ಸಾಧನೆ ಕುರಿತು ಚರ್ಚಿಸಿದರು. ರಾಜಕೀಯ ಧ್ರುವೀಕರಣ ನಡುವೆಯೂ ಬಿಜೆಪಿ ವಿರುದ್ಧ ಶಕ್ತಿಮೀರಿ ಹೋರಾಡುವ ಭರವಸೆ ನೀಡಿದರು.
ನಿತೀಶ್, ಲಾಲು ಇನ್ನು ನೆರೆಹೊರೆಯವರು!
ಬಿಹಾರ ರಾಜಕೀಯದಲ್ಲಿ ಮೊದಲಿಗೆ ಸಹೋದರರಂತಿದ್ದು ನಂತರ ಬದ್ಧ ವೈರಿಗಳಾದ ನಿತೀಶ್ ಕುಮಾರ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಇನ್ನು ಮುಂದೆ ನೆರೆಹೊರೆಯವರಾಗಲಿದ್ದಾರೆ.
ಅಧಿಕಾರ ತ್ಯಜಿಸಿದ ನಿತೀಶ್ ಅವರಿಗೆ 7 ಸರ್ಕ್ಯುಲರ್ ರಸ್ತೆಯಲ್ಲಿ ಬಂಗಲೆ ಗೊತ್ತು ಮಾಡಲಾಗಿದೆ. ಆದರೆ ಭದ್ರತೆ ಕಾರಣದಿಂದ ಈ ಕಟ್ಟಡದಲ್ಲಿ ಕೆಲವು ನಿರ್ಮಾಣ ಕಾಮಗಾರಿ ಇರುವುದರಿಂದ ತಾತ್ಕಾಲಿಕವಾಗಿ 2 ಸ್ಟ್ರ್ಯಾಂಡ್ ರಸ್ತೆ ಬಂಗಲೆಯನ್ನು ಒದಗಿಸಲಾಗಿದೆ.
ಲಾಲು ತಮ್ಮ ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರಿಗೆ 10 ಸರ್ಕ್ಯುಲರ್ ರಸ್ತೆಯಲ್ಲಿ ಒದಗಿಸಿದ ಮನೆಯೊಂದರಲ್ಲಿ ವಾಸವಿದ್ದಾರೆ. ನಿತೀಶ್ ಶೀಘ್ರ ಕಳೆದ ಒಂಬತ್ತು ವರ್ಷದಿಂದ ವಾಸವಿದ್ದ ಅನ್ನೆ ಮಾರ್ಗದ ಮುಖ್ಯಮಂತ್ರಿ ನಿವಾಸದಿಂದ ಹೊಸ ಮನೆಗೆ ತೆರಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.