ಲಖನೌ (ಪಿಟಿಐ/ಐಎನ್ಎಸ್): ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್್ ಸೈಯದ್್ ಅಹ್ಮದ್್ ಬುಖಾರಿ ಅವರು ಕಾಂಗ್ರೆಸ್ಗೆ ಮತ ಹಾಕುವಂತೆ ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿರುವುದು ಉತ್ತರಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರ ಪಿತ್ತ ಕೆರಳಿಸಿದೆ.
‘ಕಾಂಗ್ರೆಸ್ ಹಾಗೂ ಬಿಜೆಪಿ ಕಾದಾಟಕ್ಕೆ ಅಲ್ಪಸಂಖ್ಯಾತರು ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ’ ಎಂದು ಷಿಯಾ ಪಂಥದ ಕಲ್ಬೆ ಜವಾದ್ ಟೀಕಿಸಿದ್ದಾರೆ. ‘ಸೋನಿಯಾ ದರ್ಬಾರ್ನಲ್ಲಿ ಬುಖಾರಿ ಪರಿಚಾರಿಕೆ ಮಾಡುತ್ತಾರೆ’ ಎಂದು ರಾಷ್ಟ್ರೀಯ ಉಲೆಮಾ ಮಂಡಳಿ ಅಧ್ಯಕ್ಷ ಮೌಲಾನಾ ಅಮೀರ್ ರಷೀದ್ ಲೇವಡಿ ಮಾಡಿದ್ದಾರೆ.
‘ಕಾಂಗ್ರೆಸ್ ಜತೆ ಮಾಡಿಕೊಂಡ ಒಳ ಒಪ್ಪಂದ ಏನು ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಮುಸ್ಲಿಮರಿಗೆ ಕೈಕೊಟ್ಟಿದೆ’ ಎಂದು ಟೀಕಿಸಿದ್ದಾರೆ. ‘ದೇಶದಲ್ಲಿರುವ ಮುಸ್ಲಿಮರು ಬುಖಾರಿ ಸ್ವತ್ತಲ್ಲ’ ಎಂದ ಅವರು, ‘ನಿಮ್ಮಿಷ್ಟದ ಜಾತ್ಯತೀತ ಅಭ್ಯರ್ಥಿಗೆ ಮತ ಹಾಕಿ’ ಎಂದು ಅಲ್ಪಸಂಖ್ಯಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಿಎಸ್ಪಿ, ಎಸ್ಪಿ ಸೇರಿದಂತೆ ರಾಜಕೀಯ ಪಕ್ಷಗಳು ಕೂಡ ಬುಖಾರಿಗೆ ಛೀಮಾರಿ ಹಾಕಿವೆ. ‘ಅವರು ತಮ್ಮ ನಿರ್ಧಾರದ ಬಗ್ಗೆ ಇನ್ನೊಮ್ಮೆ ಯೋಚಿಸಬೇಕು’ ಎಂದು ಉತ್ತರಪ್ರದೇಶ ನಗರಾಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಅಜಂ ಖಾನ್ ಆಗ್ರಹಿಸಿದ್ದಾರೆ. 2012ರ ವಿಧಾನಸಭೆ ಚುನಾವಣೆಯಲ್ಲಿ ಬುಖಾರಿ ಎಸ್ಪಿಗೆ ಬೆಂಬಲ ನೀಡಿದ್ದರು. ಮುಲಾಯಂ ಸಿಂಗ್ ಯಾದವ್ ಅವರಿಗೆ ಮತ ಹಾಕಿ ಎಂದು ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದ್ದರು.
ಕೊಯಮತ್ತೂರು ವರದಿ: ಸಿಪಿಐ ಕೂಡ ಬುಖಾರಿ ಅವರನ್ನು ಟೀಕಿಸಿದೆ. ‘ದೇಶದ ಮುಸ್ಲಿಮರಿಗೆ ಬುಖಾರಿ ಏಕಮೇವ ಯಜಮಾನನಲ್ಲ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸುಧಾಕರ್ ರೆಡ್ಡಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಟ್ನಾ ವರದಿ: ‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತೀಯ ರಾಜಕೀಯ ಮಾಡುತ್ತಿದ್ದಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಈ ತಂತ್ರ ಫಲಿಸುವುದಿಲ್ಲ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
‘1984ರ ಸಿಖ್ ನರಮೇಧ ಹಾಗೂ 1990ರಲ್ಲಿ ಬಿಹಾರದ ಭಾಗಲ್ಪುರದಲ್ಲಿ ನಡೆದ ಕೋಮು ಗಲಭೆಗೆ ನಿಮ್ಮ ಬಳಿ ಉತ್ತರ ಇದೆಯೇ’ ಎಂದು ಸೋನಿಯಾರನ್ನು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.