ಚಡಚಣ: ಸಮೀಪದ ಹಾಲಳ್ಳಿ ಗ್ರಾಮದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಲಾರಿಯೊಂದರಲ್ಲಿ ಆಕಸ್ಮಿಕ ಕಾಣಿಸಿಕೊಂಡ ಬೆಂಕಿಯಿಂದ ಭಾಗಶ: ಸುಟ್ಟು ಕರಕಲಾದ ಘಟನೆ ಶುಕ್ರವಾರ ಬೆಳಗಿನ 7 ಗಂಟೆ ಸುಮಾರಿಗೆ ಜರುಗಿದೆ.
ಸೂರತ್ನಿಂದ ಮಂಗಳೂರಿನ ರಿಲಯನ್ಸ್ ಪಾಲಿಮರ್ ಪ್ರೊಡಕ್ಟ್ ಘಟಕಕ್ಕೆ ಪಿವಿಸಿ ಪೈಪ್ ತಯಾರಿಕಾ ಕಚ್ಚಾ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಹಾಲಳ್ಳಿ ಹಾಗೂ ಶಿರಾಡೋಣ ಗ್ರಾಮಸ್ಥರು ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿ ಆಕಸ್ಮಿಕದಲ್ಲಿ ಲಾರಿಯೊಳಗಿದ್ದ ಒಂದು ಲಕ್ಷ ನಗದು. ಅಮೂಲ್ಯ ಕಾಗದ ಪತ್ರಗಳು ಸುಟ್ಟು ಕರಕಲಾಗಿವೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಘಟನೆ ಸಂಭವಿಸಿ ಸುಮಾರು 2 ಗಂಟೆಯ ನಂತರ ಇಂಡಿಯಿಂದ ಅಗ್ನಿ ಶಾಮಕ ವಾಹನ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಅಣಕು ಪ್ರದರ್ಶನ ನಡೆಸಿದ ಪ್ರಸಂಗವೂ ನೆರದ ಜನರಿಗೆ ಮುಜುಗರ ಉಂಟು ಮಾಡಿತು.
ಗ್ರಾಮಸ್ಥರು ಬೆಳಿಗ್ಗೆ ಲಾರಿಯೊಳಗೆ ಬೆಂಕಿ ಕಾಣಿಸಿಕೊಳ್ಳುತ್ತಿರುವಾಗಲೇ ಅಗ್ನಿ ಶಾಮಕ ಸಿಬ್ಬಂದಿಗೆ ದೂರವಾಣಿ ಮಾಡಿ ಪರಸ್ಥಿತಿ ತಿಳಿಸಿದಾಗ ಇಂಡಿಯಿಂದ ಚಡಚಣದ ಹತ್ತಿರದ ಹಾಲಳ್ಳಿ ಗ್ರಾಮಕ್ಕೆ ಬರಲು ಸುಮಾರು 2 ಗಂಟೆ ತೆಗೆದುಕೊಂಡಿದ್ದರು. ಅಷ್ಟೊತ್ತಿಗಾಗಲೇ ಸ್ಥಳೀಯ ಪೊಲೀಸರು ಲಭ್ಯವಿರುವ ನೀರಿನ ಟ್ಯಾಂಕರ್ ಬಳಸಿ ಬೆಂಕಿ ನಂದಿಸಿ ಪರಿಸ್ಥತಿ ನಿಭಾಯಿಸಲು ಯಶಸ್ವಿಯಾಗಿದ್ದರು.