ಕಾರವಾರ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಕಪಾಳಕ್ಕೆ ಹೊಡೆದ, ಬೆಂಗಳೂರಿನ ಕಾರ್ತೀಕಾ ಎಂಬುವವರನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದಿರುವ ಇವರು, ಸದ್ಯ ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿ ಎಂದು ತಿಳಿದುಬಂದಿದೆ.
ಘಟನೆ ವಿವರ: ಕಾರ್ತೀಕಾ ಅವರ ಪತಿ ವಾಯುಸೇನೆಯಲ್ಲಿ ಅಧಿಕಾರಿಯಾಗಿದ್ದಾರೆ. ಪತಿಯ ಸಹೋದರ ಸೀಬರ್ಡ್ನಲ್ಲಿ ಉದ್ಯೋಗಿಯಾಗಿದ್ದು, ಅವರನ್ನು ಭೇಟಿ ಮಾಡಲು ಕುಟುಂಬ ಸಮೇತ ನೌಕಾನೆಲೆಗೆ ಬಂದಿದ್ದರು ಎನ್ನಲಾಗಿದೆ. ಕಾರ್ತೀಕಾ ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೆ ನೌಕಾನೆಲೆಯ ಹೊರಭಾಗದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದುದ್ದನ್ನು ಕಂಡ ನೌಕಾನೆಲೆ ಪೊಲೀಸರು, ಗ್ರಾಮೀಣ ಪೊಲೀಸರಿಗೆ ಸಂಜೆ ವಿಷಯ ಮುಟ್ಟಿಸಿದ್ದಾರೆ.
‘ಸ್ಥಳಕ್ಕೆ ಹೋಗಿ ವಿಚಾರಿಸಲು ಹೋದಾಗ ಕಾರ್ತೀಕಾ ಎನ್ನುವವರು ಸರಿಯಾಗಿ ಮಾಹಿತಿ ನೀಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬಳಿಕ ಅವರನ್ನು ಠಾಣೆಗೆ ಕರೆದೊಯ್ಯಲಾಯಿತು. ಆ ಸಂದರ್ಭದಲ್ಲಿ ಅವರು ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದರು. ಆಗ ವಶಕ್ಕೆ ಪಡೆದ ಅವರನ್ನು ಬುಧವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು’ ಎಂದು ಗ್ರಾಮೀಣ ಠಾಣೆ ಸಬ್ಇನ್ಸ್ಪೆಕ್ಟರ್ ಗೋವಿಂದ ದಾಸರಿ ‘ಪ್ರಜಾವಾಣಿ’ಗೆ ತಿಳಿಸಿದರು.