ನಗರಂ: ಬೈಕ್ನಲ್ಲಿ ಹೋಗುತ್ತಿದ್ದ ಅಪ್ಪ ಮತ್ತು ಮಗಳು ಕೆಲವೇ ಸೆಕೆಂಡುಗಳಲ್ಲಿ ಬೆಂದು ಹೋದರು, ಮನೆಗಳೊಳಗಿದ್ದ ಕೆಲವರು ನಿದ್ದೆಯಲ್ಲೇ ಕರಕಲಾದರು, ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳು ಭಸ್ಮವಾದವು, ಮನೆಗಳು, ಅಂಗಡಿ ಮುಂಗಟ್ಟು ಸೇರಿ ಪೂರ್ತಿ ಹಾಳಾದ ಸುಮಾರು 50 ಕಟ್ಟಡಗಳು. ಗ್ರಾಮದ ಯಾವ ಸಣ್ಣ ಹೋಟೆಲ್ನಲ್ಲಿ ಚಹಾ ಮಾಡಲು ಸ್ಟೌ ಹಚ್ಚಿದ್ದು ಸೋರುತ್ತಿದ್ದ ಅನಿಲಕ್ಕೆ ಕಿಡಿ ಹೊತ್ತಿಸಿತು ಎನ್ನಲಾಗುತ್ತಿದೆಯೋ ನೆಲಸಮವಾದ ಆ ಇಡೀ ಕಟ್ಟಡ...
– ಶುಕ್ರವಾರ ಬೆಳಗಿನ ಜಾವದ ಕರಾಳ ಗಳಿಗೆಯಲ್ಲಿ ಗೇಲ್ ಅನಿಲ ಕೊಳವೆ ಸ್ಫೋಟದಿಂದ ಪ್ರಶಾಂತವಾಗಿದ್ದ ಊರು ಕ್ಷಣ ಮಾತ್ರದಲ್ಲಿ ಸ್ಮಶಾನ ಸದೃಶವಾದ ರೀತಿ ಇದು!
ಅನಿಲ ಸೋರುವ ಪೈಪ್ಗಳನ್ನು ಒಎನ್ಜಿಸಿ ಅಧಿಕಾರಿಗಳು ಸಮರ್ಪಕವಾಗಿ ದುರಸ್ತಿ ಮಾಡುತ್ತಿರಲಿಲ್ಲ. ಮರಳು, ಮಣ್ಣು ಸುರಿದು ನೆಪಮಾತ್ರಕ್ಕೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದರು ಎಂಬುದು ಗ್ರಾಮಸ್ಥರ ಆರೋಪ.
‘ಇಡೀ ಪೂರ್ವ ಗೋದಾವರಿ ಜಿಲ್ಲೆಯಾದ್ಯಂತ ಅನಿಲ ಕೊಳವೆಗಳು ಹರಡಿಕೊಂಡಿವೆ. ಇದರಿಂದಾಗಿ ಕರಾವಳಿ ಪ್ರದೇಶದ ಜನ ಜ್ವಾಲಾಮುಖಿಯ ಮೇಲೆ ಬದುಕುತ್ತಿರುವ ಭೀತಿಯಲ್ಲೇ ದಿನಗಳನ್ನು ದೂಡುತ್ತಿದ್ದಾರೆ’ ಎಂದು ಗ್ರಾಮದ ಯುವಕರು ಅಳಲು ತೋಡಿಕೊಂಡರು.