ಬೆಂಗಳೂರು: ನಾಗವಾರ ಮೇಲ್ಸೇತುವೆಯಲ್ಲಿ ಬುಧವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾಫ್ಟ್ವೇರ್ ಎಂಜಿನಿಯರ್ ಅನೂಪ್ ಸುಂದರ್ ರಮಣಿ (26) ಎಂಬುವರು ಮೃತಪಟ್ಟಿದ್ದಾರೆ.
ಕೊಡಿಗೇಹಳ್ಳಿ ನಿವಾಸಿಯಾದ ಅನೂಪ್, ವೈಟ್ಫೀಲ್ಡ್ನಲ್ಲಿರುವ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ 12 ಗಂಟೆ ಸುಮಾರಿಗೆ ಬೈಕ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಬೈಕ್ಗೆ ಡಿಕ್ಕಿ ಹೊಡೆದಿರುವ ಅಪರಿಚಿತ ವಾಹನ, ನಂತರ ಅವರ ಮೇಲೆ ಹರಿದಿದೆ. ಇದರಿಂದ ಅನೂಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದ್ದಾರೆ.
ಮತ್ತೊಂದು ಪ್ರಕರಣ: ಕುಮಾರಸ್ವಾಮಿ ಲೇಔಟ್ ಸಮೀಪದ ಷಣ್ಮುಗ ದೇವ ಸ್ಥಾನದ ಬಳಿ ಬುಧವಾರ ರಾತ್ರಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಸುಬ್ರಹ್ಮಣಿ (50) ಎಂಬುವರು ಸಾವನ್ನಪ್ಪಿದ್ದಾರೆ. ತಲಘಟ್ಟಪುರ ನಿವಾಸಿಯಾದ ಸುಬ್ರಹ್ಮಣಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದ ಅವರು, ರಾತ್ರಿ 12 ಗಂಟೆ ಸುಮಾರಿಗೆ ಕೆಲಸದ ನಿಮಿತ್ತ ಕನಕಪುರಕ್ಕೆ ಹೋಗುತ್ತಿದ್ದರು.
ಈ ವೇಳೆ ತಿರುವು ಪಡೆಯುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡ ಅವರು, ರಸ್ತೆ ಬದಿಯ ಬಂಡೆಗೆ ಬೈಕ್ ಗುದ್ದಿಸಿದರು. ಕೆಳಗೆ ಬಿದ್ದಾಗ ಅವರ ತಲೆಗೆ ಕಲ್ಲು ತಾಗಿದ್ದರಿಂದ ತೀವ್ರ ರಕ್ತ ಸ್ರಾವ ಉಂಟಾಗಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.