ನವದೆಹಲಿ (ಪಿಟಿಐ): ವಿಮಾನ ನಿಲ್ದಾಣಗಳಲ್ಲಿನ ಸಾಮಾನ್ಯ ಭದ್ರತಾ ತಪಾಸಣೆಯಿಂದ ತಮ್ಮ ಕುಟುಂಬಕ್ಕೆ ನೀಡಿದ ವಿನಾಯಿತಿ ಹಿಂತೆಗೆದುಕೊಳ್ಳುವಂತೆ ಪ್ರಿಯಾಂಕಾ ವಾಧ್ರಾ ಅವರು ಎಸ್ಪಿಜಿಗೆ ಮನವಿ ಮಾಡಿಕೊಂಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ‘ಭದ್ರತೆಯು ಇನ್ನೊಬ್ಬರ ಮೂಗಿನ ನೇರಕ್ಕೆ ಇರುವುದಿಲ್ಲ. ಇದಕ್ಕೆ ರಾಜಕೀಯ ಬಣ್ಣ ಬಳಿದು ಲಾಭ ಮಾಡಿಕೊಳ್ಳಲು ಯತ್ನಿಸಬಾರದು’ ಎಂದಿದ್ದಾರೆ.
ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ಭದ್ರತಾ ಸಂಸ್ಥೆಗಳಿಗೆ ಬಿಟ್ಟ ವಿಷಯ’ ಎಂದು ಪ್ರತಿಕ್ರಿಯಿಸಿದರು. ತಮ್ಮ ಪತಿ ರಾಬರ್ಟ್ ವಾಧ್ರಾ ಅವರಿಗೆ ನೀಡಿರುವ ವಿಶೇಷ ಭದ್ರತಾ ಸೌಲಭ್ಯಗಳನ್ನು ರದ್ದುಪಡಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಬಂದ ವರದಿಗಳ ಬೆನ್ನಲ್ಲಿಯೇ ಎಸ್ಪಿಜಿ ಮುಖ್ಯಸ್ಥ ದುರ್ಗಾ ಪ್ರಸಾದ್ ಅವರಿಗೆ ಪತ್ರ ಬರೆದು ಪ್ರಿಯಾಂಕಾ ಈ ಕೋರಿಕೆ ಸಲ್ಲಿಸಿದ್ದರು.