ನವದೆಹಲಿ (ಪಿಟಿಐ): 'ಸಹಕಾರದ ಅಂತಃಸ್ಫೂರ್ತಿಯಿಂದ ಭಾರತದೊಂದಿಗೆ ಎಲ್ಲಾ ವಿಷಯಗಳ ಬಗೆಗೂ ಚರ್ಚಿಸಲು ನನ್ನ ಸರ್ಕಾರ ಸಿದ್ಧವಾಗಿ ನಿಂತಿದೆ' ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮಂಗಳವಾರ ಇಲ್ಲಿ ಹೇಳಿದರು.
ನರೇಂದ್ರ ಮೋದಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಈದಿನ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ 'ನಾವು ಘರ್ಷಣೆಯಿಂದ ಸಹಕಾರದ ಬದಲಾವಣೆಯತ್ತ ಸಾಗಬೇಕು ಮತ್ತು ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪಗಳಲ್ಲಿ ಮುಳುಗಬಾರದು ಎಂದು ನಾನು ಒತ್ತಾಯಿಸುತ್ತೇನೆ' ಎಂದೂ ಅವರು ನುಡಿದರು.
'ಶಾಂತಿ ಮತ್ತು ಭದ್ರತೆಗಾಗಿ, ನಾವು ಅಭದ್ರತೆಗೆ ಬದಲಾಗಿ ಸ್ಥಿರತೆಯನ್ನು ತರಬೇಕಾಗಿದೆ' ಎಂದೂ ಅವರು ಹೇಳಿದರು.
'ಇಂದಿನ ಸಭೆಯ ಬೆಳಕಿನಲ್ಲಿ ಉಭಯ ವಿದೇಶಾಂಗ ಕಾರ್ಯದರ್ಶಿಗಳು ಶೀಘ್ರವೇ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆಗಳ ಕಾರ್ಯಸೂಚಿ ಅಂತಿಮಗೊಳಿಸುವರು' ಎಂದೂ ಷರೀಫ್ ಪ್ರಕಟಿಸಿದರು.