ನವದೆಹಲಿ (ಪಿಟಿಐ): ಹಿಂಸಾಚಾರ ಪೀಡಿತ ಯೆಮನ್ನಲ್ಲಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಾವಿರಾರು ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಸೋಮವಾರ ಬೆಳಿಗ್ಗೆ ಏರ್ಇಂಡಿಯಾ ವಿಮಾನವನ್ನು ಕಳುಹಿಸಲಾಗಿದೆ.
180 ಆಸನಗಳ ಸಾಮರ್ಥ್ಯವುಳ್ಳ ಏರ್ಬಸ್ ಎ320 ವಿಮಾನವು ದೆಹಲಿಯಿಂದ ಸೋಮವಾರ ಬೆಳಿಗ್ಗೆ 7:45ಕ್ಕೆ ಹೊರಟಿತು. ಮಸ್ಕತ್ ಮಾರ್ಗವಾಗಿ ಈ ವಿಮಾನವು ಯೆಮನ್ ರಾಜಧಾನಿ ‘ಸಾನಾ’ವನ್ನು ತಲುಪಲಿದ್ದು, ಅಲ್ಲಿಂದ ಸಂಜೆ ಮರಳಿ ನವದೆಹಲಿಗೆ ಹಾರಲಿದೆ. ಯೆಮನ್ನಲ್ಲಿ ಸುಮಾರು 3,500 ಭಾರತೀಯರು ತೊಂದರೆಯಲ್ಲಿ ಸಿಲುಕಿದ್ದಾರೆ. ಇವರಲ್ಲಿ ಹೆಚ್ಚಿನವರು ದಾದಿಯರು.
ಯೆಮನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗಾಗಿ ವಿಮಾನ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಭಾನುವಾರ ಹೇಳಿತ್ತು. ಈ ಸಂಬಂಧ ಏರ್ ಇಂಡಿಯಾದೊಂದಿಗೆ ಮಾತುಕತೆ ನಡೆಸಲಾಗಿದ್ದು, ಪರವಾನಗಿ ಲಭಿಸಿದೆ. ವಿಮಾನ ಸಾನಾಗೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.