ಕನ್ಹಾ ಚಟ್ಟಿ, ಜಾರ್ಖಂಡ್ (ಪಿಟಿಐ): ಭಾರತ ನೆಲದಲ್ಲಿ ಚೀನಾ ರಸ್ತೆ ನಿರ್ಮಿಸುತ್ತಿರುವುದರ ವಿರುದ್ಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಭಾರತದ ಭಾಗದಲ್ಲಿ ಚೀನಾ ರಸ್ತೆ ಕಾಮಗಾರಿ ಮುಂದುವರಿದರೆ ಏನು ಮಾಡುವಿರಿ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ಇಂತಹ ಸಂದರ್ಭದಲ್ಲಿ ಅಂತಹ ರಸ್ತೆಯನ್ನು ಒಡೆದು ಹಾಕುವುದಲ್ಲದೆ ಬೇರೆ ಆಯ್ಕೆಯೇ ನಮ್ಮ ಸೇನೆಗೆ ಇಲ್ಲ’ ಎಂದು ಹೇಳಿದ್ದಾರೆ.
‘ನಮ್ಮ ಪ್ರದೇಶಕ್ಕೆ ಜನರು ಅಕ್ರಮ ವಾಗಿ ನುಸುಳುವಂತೆ ಮಾಡುವುದು ಮತ್ತು ರಸ್ತೆ ಕಾಮಗಾರಿ ನಡೆಸುವ ಅಭ್ಯಾಸವನ್ನು ಚೀನಾ ಕೈಬಿಡ ಬೇಕು. ಚೀನಾದ ಜೊತೆಗೆ ಉತ್ತಮ ಬಾಂಧವ್ಯ ಉಳಿಸಿ ಕೊಳ್ಳಲು ನಾವು ಬಯಸುತ್ತೇವೆ. ಅವರೂ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳ ಬೇಕು’ ಎಂದು ರಾಜನಾಥ್ ಹೇಳಿದ್ದಾರೆ.
ಭಾರತದ ನೆಲದೊಳಕ್ಕೆ ಚೀನೀಯರ ನುಸುಳುವಿಕೆ ಗಡಿಯಲ್ಲಿ ಬಿಗುವಿನ ಪರಿಸ್ಥಿತಿಗೆ ಕಾರಣವಾಗಿದೆ. ಈಚೆಗೆ ನವದೆಹಲಿಯಲ್ಲಿ ಪ್ರಧಾನಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭೇಟಿ ಯಾದಾಗಲೂ ವಿಚಾರ ಪ್ರಸ್ತಾಪವಾಗಿತ್ತು.